ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಡೆಂಘೀ ದುಪ್ಪಟ್ಟಾಗಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ. 6 ಜನ ಮೃತಪಟ್ಟಿದ್ದಾರೆ. ಸೆಪ್ಟಂಬರ್ನಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಡೆಂಘೀ ವ್ಯಾಪಕವಾಗಿ ಹರಡುತ್ತಿದ್ದು, ಡೆಂಘೀ ನಿಯಂತ್ರಣಕ್ಕೆ ಬಿಬಿಎಂಪಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ವಿಶೇಷ ತಂಡ ರಚಿಸಲಾಗಿದೆ. ಜೊತೆಗೆ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. 2024ರಲ್ಲಿ ಜನವರಿಯಿಂದ ಜೂನ್ ವರೆಗೆ 732 ಡೆಂಘಿ ಪ್ರಕರಣ ವರದಿಯಾಗಿದ್ದವು. ಸದ್ಯ ಬೆಂಗಳೂರು 1563, ಚಿಕ್ಕಮಗಳೂರು 491, ಮೈಸೂರು 479, ಹಾವೇರಿ 451, ಚಿತ್ರದುರ್ಗ 265, ದಕ್ಷಿಣ ಕನ್ನಡ 233 ಡೆಂಗ್ಯೂ ಕೇಸ್ ಇದೆ.
ಹೆಣ್ಣು ಎಡಿಸ್ ಈಜಿಪ್ಟಿ ಸೊಳ್ಳೆಯಿಂದ ಹರಡುವ ಸೋಂಕು ಇದಾಗಿದ್ದು, ಮನುಷ್ಯರ ದೇಹಕ್ಕೆ ಕಚ್ಚಿ ರಕ್ತದಲ್ಲಿ ಮೊಟ್ಟೆಯನ್ನಿಡುತ್ತದೆ. ಏಡಿಸ್ ಈಜಿಪ್ಟಿ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಮಳೆ ನೀರಿನಲ್ಲಿ, ನಿಂತ ನೀರಿನಲ್ಲಿ, ಹೂವಿನ ಕುಂಡ, ಪ್ಲಾಸ್ಟಿಕ್ ಬ್ಯಾಗ್, ಹಳೆಯ ಟೈರ್, ಪಾತ್ರೆಗಳು, ಗುಂಡಿಗಳು ಮತ್ತು ಕಸಗಳಲ್ಲಿ ಈ ಡೆಂಘೀ ಹರಡೋ ಸೊಳ್ಳೆ ಉತ್ಪತ್ತಿಯಾಗುತ್ತದೆ.
ಡೆಂಘೀ ಜ್ವರಕ್ಕೆ ಔಷಧ ತೆಗೆದುಕೊಳ್ಳಲು ಆರಂಭಿಸಿದ ಒಂದು ವಾರದ ನಂತರ ವ್ಯಕ್ತಿ ಗುಣಮುಖನಾಗುತ್ತಾನೆ. ದೇಹ ನೀರಿಲ್ಲದೆ ಒಣಗುವುದನ್ನು ತಪ್ಪಿಸಲು ಧಾರಾಳವಾಗಿ ದ್ರವ ಪದಾರ್ಥ ತೆಗೆದುಕೊಳ್ಳಬೇಕು. ಡೆಂಗ್ಯು ಜ್ವರಕ್ಕೆ ಯಾವುದೇ ಚುಚ್ಚುಮದ್ದು ಇಲ್ಲ. ಮನುಷ್ಯನ ಪ್ರತಿ ಎಂಎಲ್ ರಕ್ತದಲ್ಲಿ ಪ್ಲೇಟ್ಲೆಟ್ನ ಸಂಖ್ಯೆ 30 ಸಾವಿರಕ್ಕಿಂತ ಕಡಿಮೆಯಾದರೆ ಆಸ್ಪತ್ರೆಗೆ ದಾಖಲಾಗುವುದು ಉತ್ತಮ. ಸೊಳ್ಳೆ ಕಚ್ಚದಂತೆ ಆದಷ್ಟು ದೇಹವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಸೊಳ್ಳೆ ಮನೆ ಸುತ್ತಮುತ್ತ, ಮನೆಯೊಳಗೆ ಬಾರದಂತೆ ತಡೆಗಟ್ಟಬೇಕು. ಮನೆ ಸುತ್ತಮುತ್ತ ನೀರು ನಿಂತುಕೊಳ್ಳದಂತೆ ಸ್ವಚ್ಛವಾಗಿಟ್ಟುಕೊಂಡರೆ ಆದಷ್ಟು ಡೆಂಘೀ ಬಾರದಂತೆ ತಡೆಗಟ್ಟಬಹುದು.