ರಾಜ್ಯ ವಿಧಾನಮಂಡಲದ ಅಧಿವೇಶನ ಜುಲೈ 15 ರಿಂದ ಪ್ರಾರಂಭಗೊಳ್ಳಲಿದ್ದು, ಈ ಬಾರಿ ಶಾಸಕರು ಸದನದಲ್ಲಿ ಉಪಸ್ಥಿತರಿದ್ದ ಅವಧಿಯನ್ನು ತಂತ್ರಜ್ಞಾನ ಆಧರಿಸಿ ಲೆಕ್ಕ ಹಾಕಲಾಗುವುದು ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಜುಲೈ 15ರಂದು ಬೆಳಗ್ಗೆ 11ಕ್ಕೆ ಪ್ರಾರಂಭವಾಗುತ್ತದೆ. ಕಳೆದ ಅಧಿವೇಶನದಲ್ಲಿ ಕಲಾಪಕ್ಕೆ ಬೇಗ ಹಾಜರಾಗುವ ಸದಸ್ಯರಿಗೆ ಬಹುಮಾನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಯಾರು ಎಷ್ಟು ಸಮಯ ಇದ್ದಾರೆ? ಎಷ್ಟು ಬಾರಿ ಎದ್ದು ಹೋದರು? ಕಡೆಯವರೆಗೆ ಇದ್ದವರು ಯಾರು? ಎಂಬುದನ್ನೂ ಗಣನೆಗೆ ತೆಗೆದುಕೊಳ್ಳುತ್ತೇವೆ. ತಂತ್ರಜ್ಞಾನ ಆಧರಿಸಿ ಈ ಅವಧಿಯನ್ನು ಲೆಕ್ಕ ಹಾಕುತ್ತೇವೆ ಎಂದು ಹೇಳಿದರು.
ಜುಲೈ 20ರಂದು ವಿಶ್ವ ಚೆಸ್ ದಿನಾಚರಣೆ ಇದೆ. ಈ ಹಿನ್ನೆಲೆಯಲ್ಲಿ ಶಾಸಕರು, ಅಧಿಕಾರಿಗಳು ಹಾಗೂ ಪತ್ರಕರ್ತರಿಗೆ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ. ಶಾಸಕರ ಕಪ್ ಹೆಸರಿನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಯಾರೂ ಬೇಕಾದರೂ ಭಾಗವಹಿಸಬಹುದು. ಕಲಾಪ ವೀಕ್ಷಣೆಗೆ ಬರುವ ಶಾಲಾ ಮಕ್ಕಳು ಬಿಸಿಲು ಮಳೆಯಲ್ಲಿ ನಿಲ್ಲುವುದನ್ನು ತಪ್ಪಿಸಲು ಬ್ಯಾಂಕ್ವೆಟ್ ಹಾಲ್ ಸಮೀಪ ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ ರೀತಿ ವಿವಿಧ ಕ್ಷೇತ್ರಗಳ ಗಣ್ಯರಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಅತ್ಯುತ್ತಮ ಶಾಸಕರ ಆಯ್ಕೆಗೆ ಸಮಿತಿ ರಚಿಸಲಾಗಿದೆ. ಕ್ಷೇತ್ರದ ಜನರು ಅಧಿವೇಶನ ಸಂದರ್ಭದಲ್ಲಿ ಶಾಸಕರು ಕಲಾಪದಲ್ಲಿ ಕುಳಿತು ಚರ್ಚಿಸುವುದಕ್ಕೆ ಅವಕಾಶ ಮಾಡಿಕೊಡಲಿ. ಆಮೇಲೆ ಸಾಕಷ್ಟು ಸಮಯ ಇರುತ್ತದೆ. ಆ ಸಂದರ್ಭದಲ್ಲಿ ಬೇಕಾದರೆ ನಿಮ್ಮ ನಿಮ್ಮ ಕೆಲಸ ಮಾಡಿಸಿಕೊಳ್ಳಿ. ಸಚಿವರು ವಿಧಾನಸೌಧದಲ್ಲಿ ಯಾವ ಸಂದರ್ಭದಲ್ಲಿ ಇರುತ್ತಾರೆ, ಸಾರ್ವಜನಿಕರ ಭೇಟಿ ಸಮಯ ಯಾವಾಗ ಎಂಬಿತ್ಯಾದಿ ಮಾಹಿತಿಗಳು ಲಭಿಸುವಂಥ ಆ್ಯಪ್ನ್ನು ಸದ್ಯದಲ್ಲೇ ರಚಿಸಲಾಗುವುದು ಎಂದರು.