ಛತ್ತೀಸ್ಗಢ ಗಡಿಯಲ್ಲಿರುವ, ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ಗೆ 12 ನಕ್ಸಲರು ಹತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಕ್ಸಲ್ ನಿಗ್ರಹ ಪಡೆಗೆ ರಾಜ್ಯದಲ್ಲಿ ಸಿಕ್ಕ ದೊಡ್ಡ ಯಶಸ್ಸು ಇದಾಗಿದೆ. ನಕ್ಸಲರ ಪ್ರಮುಖ ಕಾರ್ಯಸ್ಥಾನವಾದ ಛತ್ತೀಸ್ಗಢದ ಗಡಿಗೆ ಹೊಂದಿ ಕೊಂಡಿರುವ ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿ ವೇಳೆ 12 ನಕ್ಸಲರು ಹತರಾಗಿದ್ದಾರೆ. ಇದು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಜಯವಾಗಿದೆ. ವಂಡೋಲಿ ಗ್ರಾಮದ ಅರಣ್ಯದಲ್ಲಿ ಬುಧವಾರ ಮಹಾರಾಷ್ಟ್ರ ಪೊಲೀಸರು ಮತ್ತು ಸಿ60 ಕಮಾಂಡೋಗಳನ್ನು ಒಳಗೊಂಡ ತಂಡವು ಕಾರ್ಯಾಚರಣೆ ನಡೆಸುವಾಗ ನಕ್ಸಲರ ತಂಡ ಎದುರಾಗಿತ್ತು. ಈ ವೇಳೆ ಉಭಯ ಗುಂಪುಗಳ ನಡುವೆ ಸತತ 6 ತಾಸುಗಳ ಕಾಲ ಗುಂಡಿನ ದಾಳಿ ನಡೆದಿದೆ. ಸಂಜೆ ವೇಳೆಗೆ ಗುಂಡಿನ ದಾಳಿ ನಿಂತ ಬಳಿಕ ಸ್ಥಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ 12 ನಕ್ಸಲರ ಶವ ಪತ್ತೆಯಾಗಿದೆ ಎಂದು ಗಡ್ಚಿರೋಲಿ ಪೊಲೀಸ್ ಅಧೀಕ್ಷಕ ನೀಲೋ ತಲ್ ತಿಳಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಕೂಡಾ ಗಾಯಗೊಂಡಿದ್ದಾರೆ. ಚಕಮಕಿ ನಡೆದ ಸ್ಥಳದಿಂದ ನಕ್ಸಲರು ಬಳಸುತ್ತಿದ್ದ 3 ಎಕೆ 47 ಗನ್, 2 ಇನ್ಸಾಸ್ ರೈಫಲ್ಸ್, ಒಂದು ಎಸ್ಎಲ್ಆರ್ ಗನ್ ವಶಪಡಿಸಿಕೊಳ್ಳಲಾಗಿದೆ. ನಕ್ಸಲರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ ಸಿ60 ಕಮಾಂಡೋ ತಂಡಕ್ಕೆ ಗೃಹ ಸಚಿವ ದೇವೇಂದ್ರ ಫಡ್ನವೀಸ್ 51 ಲಕ್ಷ ರುಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.