ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಆರೋಪಿಸುವ ದರಪಟ್ಟಿ ಹಿಡಿದು ಬಿಜೆಪಿ ನಾಯಕರು ಇಂದು ವಿಧಾನಸೌಧ ಅವರಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಪರಿಷತ್ ಸದಸ್ಯರಾದ ಸಿಟಿ ರವಿ, ಎನ್ ರವಿಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ಸರ್ಕಾರ ಯಾವ್ಯಾವ ಇಲಾಖೆಯಲ್ಲಿ ನೇಮಕಾತಿಗೆ, ವರ್ಗಾವಣೆಗೆ ಎಷ್ಟೆಷ್ಟು ಲಂಚ ಪಡೆಯುತ್ತಿದೆ ಎನ್ನುವುದನ್ನು ಸೂಚಿಸುವ ಪ್ಲಕಾರ್ಡ್ ಗಳನ್ನು ನಾಯಕರು ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ರೈತ ಮತ್ತು ಶಿಕ್ಷಕರ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ದಲಿತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ವ್ಯಾಪಾರ ವ್ಯಾಪಾರ ಎಲ್ಲದರಲ್ಲೂ ವ್ಯಾಪಾರ ಅಂತ ಘೋಷಣೆಗಳನ್ನು ಬಿಜೆಪಿ ನಾಯಕರು ಕೂಗಿದರು. ಅಬಕಾರಿ ಇಲಾಖೆಯಲ್ಲಿ ಅಬ್ಕಾರಿ ನಿರೀಕ್ಷಕನ ಹುದ್ದೆಗೆ ₹ 30-50 ಲಕ್ಷ, ಅಬ್ಕಾರಿ ಕಮೀಷನರ್ ಹುದ್ದೆಗೆ ₹ 75 ಲಕ್ಷದಿಂದ 1.5 ಕೋಟಿ ರೂ. ಹೀಗೆ ಆಯಾ ಇಲಾಖೆಯಲ್ಲಿ ಎಷ್ಟೆಷ್ಟು ಲಂಚ ಪಡೆಯಲಾಗುತ್ತಿದೆ ಅನ್ನೋದನ್ನು ಪ್ಲಕಾರ್ಡ್ ಗಳ ಮೇಲೆ ಬರೆಯಲಾಗಿತ್ತು.