ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಶನಿವಾರ ಕರದಂಟುನಗರಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರ ಅಕ್ಷರಶಃ ಜಲದಿಗ್ಧಂಧನಕ್ಕೆ ಒಳಗಾಗಿದೆ. ನಗರದ ಶೇ.40ಕ್ಕೂ ಹೆಚ್ಚು ಭಾಗ ಜಲಾವೃತಗೊಂಡಿದೆ. ಘಟಪ್ರಭಾ ನದಿಗೆ 82 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಘಟಪ್ರಭಾಹಾಗೂಮಾರ್ಕಂಡೇಯನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗೋಕಾಕ್ ಹೊರವಲಯದ ಎರಡು ಸೇತುವೆಗಳು ಜಲಾವೃತಗೊಂಡು ನಗರಕ್ಕೆ ಜಲದಿಗ್ಧಂಧನದ ಭೀತಿ ಎದುರಾಗಿದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಲೋಳಸೂರ ಮತ್ತು ಚಿಕ್ಕೊಳಿ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಫಾಲ್ಸ್ ಹಾಗೂ ಗೋಕಾಕ್ ನಗರದ ಮಧ್ಯೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗೋಕಾಕ್ನ ಹಳೇ ದನಗಳ ಪೇಟೆ, ಡೋರ ಓಣಿ, ದಾಳಂಬಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ, ಸಿಂದಿ ಕೂಟದಲ್ಲಿನ 200ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.