ಹೊಸದಿಲ್ಲಿಯಲ್ಲಿ ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರ ಜತೆಗೆ ವಿಶೇಷ ಅತಿಥಿಗಳಾಗಿ ಭಾಗವಹಿಸಲು, ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಿಂದ 12 ಮಂದಿ ಫಲಾನುಭವಿಗಳಿಗೆ ಅವಕಾಶ ಲಭಿಸಿದೆ. ಕೇಂದ್ರ ಸರಕಾರದ ಲಖ್ಪತಿ ದೀದಿ, ಪಿಎಂಶ್ರೀ ಯೋಜನೆ, ಎಫ್ಪಿಒ ಯೋಜನೆಗಳ ಸಾವಿರಾರು ಫಲಾನುಭವಿಗಳ ಪೈಕಿ ಚಿತ್ರದುರ್ಗ ಜಿಲ್ಲೆಯ 12 ಮಂದಿಗೆ ಮಾತ್ರ ದಿಲ್ಲಿಯ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಸುವರ್ಣಾವಕಾಶ ಒದಗಿ ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸ್ವಸಹಾಯ ಗುಂಪಿನ ಮೂಲಕ ಕೇಂದ್ರ ಸರಕಾರದ ದೀನದಯಾಳ್ ಉಪದ್ಯಾಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ತರಬೇತಿ ಪಡೆದು ಶ್ರೀ ಚನ್ನಕೇಶ್ವರ ಆಗ್ರೋ ಫುಡ್ ಇಂಡಸ್ಟ್ರಿಯಿಂದ ತಿಂಗಳಿಗೆ ಐದು ಲಕ್ಷ ರುಪಾಯಿಗಿಂತ ಹೆಚ್ಚು ವಹಿವಾಟು ನಡೆಸುತ್ತಿರುವ ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮದ ಲಖ್ಪತಿ ದೀದಿ ಜಿ.ಎಂ. ವೀಣಾ ಹಾಗೂ ಪತಿ ಕಾಂತ್ರಾಜ್, ಭರಮಸಾಗರದ ಗ್ರಾಮೀಣ ಪಿಎಂಶ್ರೀ ಸರಕಾರಿ ಪ್ರೌಢಶಾಲೆ ಹತ್ತನೇ ತರಗತಿ ವಿದ್ಯಾರ್ಥಿನಿ ಯಾಸ್ಮಿನ್ ತಾಜ್, ಶಾಲೆ ಶಿಕ್ಷಕಿ ಕೆ.ಬಿ. ಗುರುಶಾಂತಮ್ಮ ಅವರು, ತಾವಿರುವ ಸ್ಥಳದಿಂದ ಬಸ್ನಲ್ಲಿ ಬೆಂಗಳೂರಿಗೆ, ಬೆಂಗಳೂರಿನಿಂದ ವಿಮಾನದ ಮೂಲಕ ದಿಲ್ಲಿ ತಲುಪುವರು. ಹೊಸದುರ್ಗ ತಾಲೂಕಿನ ಶ್ರೀರಾಂಪುರ ಗ್ರಾಮದ ದುರ್ಗದಸಿರಿ ರೈತ ಉತ್ಪಾದಕ ಸಂಸ್ಥೆ ಸಿಇಒ ಬಿ.ಜಿ.ಗಿರೀಶ್, ನಿರ್ದೇಶಕರಾದ ಎನ್.ಐ.ಹನುಮಂತಪ್ಪ, ಕೆ.ಆರ್.ಗಿರೀಶ, ಎಸ್.ಲಿಂಗರಾಜು, ಎನ್.ನರಸಿಂಹಮೂರ್ತಿ, ರಾಜಣ್ಣ, ಕೆ.ಎಂ.ಕುಮಾರಸ್ವಾಮಿ, ಕೆ.ಆರ್.ಪವನ್ ಎಸಿ ಕೋಚ್ ರೈಲಿನಲ್ಲಿ ಹೊಸದಿಲ್ಲಿಗೆ ತೆರಳುತ್ತಿದ್ದು, ಎಲ್ಲ ವೆಚ್ಚವನ್ನು ಕೇಂದ್ರ ಸರಕಾರ ಭರಿಸಲಿದೆ.