ಕೇವಲ ನೂರು ಗ್ರಾಂ ತೂಕ ಹೆಚ್ಚಿದ್ದರಿಂದ ಫೈನಲ್ನಿಂದ ಅನರ್ಹಗೊಂಡು. ಹಲವು ಹೋರಾಟಗಳನ್ನು ಎದುರಿಸಿ ಕೊನೆಗೂ ಈ ನೆಲದ ಕುಸ್ತಿ ಕುವರಿ ತವರಿಗೆ ಆಗಮಿಸಿದ್ದಾಳೆ. ವಿನೇಶ್ ಪೋಗಟ್ ಅವರು ಇಂದು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಏರ್ಪೋರ್ಟ್ಗೆ ಬಂದಿಳಿದ ವಿನೇಶ್ ಪೋಗಟ್ಗೆ ಅದ್ದೂರಿ ಸ್ವಾಗತ ದೊರಕಿತು. ಕುಸ್ತಿಪಟು ಭಜರಂಗ ಪುನಿಯಾ, ಸಾಕ್ಷಿ ಮಲ್ಲಿಕ್ ಸೇರಿದಂತೆ ಸಾವಿರಾರು ಸಂಖ್ಯೆಯ ಜನರು ವಿನೇಶ್ ಪೋಗಟ್ರನ್ನ ಮನದುಂಬಿ ಸ್ವಾಗತಿಸಿದ್ದಾರೆ.
ಅದ್ದೂರಿ ಸ್ವಾಗತ, ಜನರ ಪ್ರೀತಿ, ಅವರ ಪರವಾದ ಘೋಷಣೆ ಇವೆಲ್ಲವನ್ನು ಕಂಡು ವಿನೇಶ್ ಪೋಗಟ್ ಒಂದು ಕ್ಷಣ ಭಾವುಕರಾದ್ರು. ಬೆಳ್ಳಿ ಬಂಗಾರದ ಪದಕ ತಂದಿದ್ದಕ್ಕಿಂತಲೂ ಹೆಚ್ಚು ಪ್ರೀತಿ ಅವರಿಗೆ ಕಂಡಿತೇನೋ.. ಅಕ್ಷರಶಃ ಮಗುವಿನಂತೆ ಅತ್ತು ಬಿಟ್ಟರು ವಿನೇಶ್ ಪೋಗಟ್. ಮಗಳಿಗೆ ದೊರಕಿದ ಈ ಮಹಾ ಸ್ವಾಗತವನ್ನು ಕಂಡ ವಿನೇಶ್ ಪೋಗಟ್ ತಾಯಿ, ನಮ್ಮ ಊರಿನ ಪ್ರತಿಯೊಂದು ಮನೆಯವರು ಇಲ್ಲಿ ನೆರೆದಿದ್ದಾರೆ, ಅಕ್ಕಪಕ್ಕದ ಊರಿನವರು ಅವಳನ್ನು ಸ್ವಾಗತಿಸಲು ಬಂದಿದ್ದಾರೆ. ಅವಳು ನನಗೆ ಎಂದಿಗೂ ಚಾಂಪಿಯನ್, ಈ ದೇಶ ಅವಳಿಗೆ ಚಿನ್ನದ ಪದಕಕ್ಕಿಂತಲೂ ದೊಡ್ಡ ಗೌರವ ನೀಡಿದೆ ಎಂದಿದ್ದಾರೆ.
50 ಕೆಜಿ ಕುಸ್ತಿ ವಿಭಾಗದಲ್ಲಿ 100 ಗ್ರಾಂ ಹೆಚ್ಚಿಗೆ ತೂಕ ಬಂದಿದ್ದ ಕಾರಣದಿಂದ ವಿನೇಶ್ ಪೋಗಟ್ ಫೈನಲ್ ಸುತ್ತಿಗೆ ಅನರ್ಹರಾಗಿದ್ದರು. ಅದನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಫೋರ್ಟ್ಸ್ಗೆ ಮನವಿಯನ್ನು ಸಲ್ಲಿಸಿದ್ದರು. ಅದರ ತೀರ್ಪಿಗಾಗಿ ಕಾದಿದ್ದ ವಿನೇಶ್ ಪೋಗಟ್ ಪ್ಯಾರಿಸ್ನಲ್ಲಿಯೇ ಉಳಿದಿದ್ದರು. ಸಿಎಎಸ್ ಅವರ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಪೋಗಟ್ ಮರಳಿ ಭಾರತಕ್ಕೆ ಬಂದಿದ್ದಾರೆ. ಈ ದೇಶದ ಜನರ ಪ್ರೀತಿ ಮತ್ತು ಅವರ ಮೇಲಿನ ಅಭಿಮಾನ ಕಂಡು ಕಣ್ಣೀರಾಗಿ, ಕಣ್ಣೀರಿನಲ್ಲಿಯೇ ಒಂದು ಧನ್ಯವಾದ ಹೇಳಿ ವಿನೇಶ್ ಪೋಗಟ್ ತೆರಳಿದ್ದಾರೆ.