ಭಾದ್ರಪದ ಮಾಸದ ಮೊದಲ ಹಬ್ಬ ಸ್ವರ್ಣಗೌರೀ ವ್ರತ. ಇದನ್ನು ಭಾರತದಾದ್ಯಂತ ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಇದನ್ನು ಹರಿತಾಲಿಕಾ ವ್ರತ ಎಂಬುದಾಗಿಯೂ ಕರೆಯುತ್ತಾರೆ. ವಿಶೇಷವಾಗಿ ಸ್ತ್ರೀಯರು ಆಚರಿಸುವ ಹಬ್ಬಗಳಲ್ಲಿ ಇದೂ ಒಂದು.
ಗೌರೀ ತೃತೀಯಾ ಯಾಕೆ?
ಗೌರೀ ಹಬ್ಬವನ್ನು ತೃತೀಯಾ ತಿಥಿಯಲ್ಲಿಯೇ ಏಕೆ ಮಾಡಬೇಕು? ಎಂದರೆ ಗಣೇಶ ಚತುರ್ಥಿಯ ಹಿಂದಿನ ದಿನ ಅವಮ ತಾಯಿಯ ಪೂಜೆ ಎಂದು ಹೇಳುವವರೂ ಇದ್ದಾರೆ. ಒಂದು ರೀತಿಯಲ್ಲಿ ಅದೂ ಸರಿಯೇ. ಆದರೆ ಅದಕ್ಕಿಂತ ಭಿನ್ನವಾಗಿ ಇದೆ. ಯಾಕೆ ಅಂದರೆ ತೃತೀಯಾ ತಿಥಿಯ ಅಧಿದೇವತೆ ಗೌರಿಯೇ ಆಗಿದ್ದಾಳೆ. ಅದಕ್ಕೋಸ್ಕರ ಆ ದಿನದಿಂದ ದೇವಿಯು ಪ್ರಸನ್ನಳಾಗುತ್ತಾಳೆ. ಇನ್ಮೊಂದು ಕಾರಣ ಈ ಮಾಸ ಅಧಿಪತಿ ಶಿವನಾಗಿದ್ದಾನೆ. ಅದಕ್ಕಾಗಿ ಆತನ ಪತ್ನಿಯಾದ ಗೌರಿಯನ್ನು ಆರಾಧಿಸುವುದು ಕ್ರಮ.
ಯಾರು ಪೂಜಿಸುವುದು?
ಸ್ವರ್ಣಗೌರಿಯನ್ನು ಯಾರು ಪೂಜಿಸುತ್ತಾರೆ ಎಂದರೆ ಸುಮಂಗಲಿಯರು ಪೂಜಿಸುವುದು. ಸ್ವರ್ಣಗೌರಿಯ ಮೂರ್ತಿಯನ್ನು ಮಾಡಿ ಆರಾಧನೆ ಮಾಡುತ್ತಾರೆ. ಆದರೆ ಕಲಶಸ್ಥಾಪನೆ ಮಾಡಿ, ಶುದ್ಧವಾದ ವಸ್ತ್ರದಿಂದ ಅಲಂಕರಿಸಿ, ವಿವಿಧ ಆಭರಣಗಳನ್ನು ತೊಡಿಸಿ, ಗೌರಿಯನ್ನು ಪ್ರತಿಷ್ಠಪಿಸಿ, ಪೂಜಿಸುವುದು ಶ್ರೇಷ್ಠ. ಗೌರಿಯನ್ನು ಸುಮಂಗಲಿಯರು ತಮ್ಮ ಇಷ್ಟಾರ್ಥ ಸಿದ್ಧಿಗೆ ಈ ಹಬ್ಬವನ್ನು ವ್ರತವಾಗಿ ಕೂಡ ಮಾಡುತ್ತಾರೆ. ಯಾವುದೇ ಆಹಾರವನ್ನು ತೆಗೆದುಕೊಳ್ಳದೇ ಶುದ್ಧವಾದ, ಶ್ರದ್ಧಾ ಭಕ್ತಿಪೂರ್ವಕ ಮನಸ್ಸಿನಿಂದ ಗೌರಿಯನ್ನು ಆರಾಧಿಸಬೇಕು.
ಸ್ವರ್ಣಗೌರಿಯ ಬಗ್ಗೆ ಒಂದು ಕಥೆ :
ಒಮ್ಮೆ ಒಂದು ಪುಟ್ಟ ಹಳ್ಳಿಯಲ್ಲಿ ಸುಶೀಲ ಎಂಬ ಭಕ್ತೆ ವಾಸಿಸುತ್ತಿದ್ದಳು. ಅವಳು ತನ್ನ ಪತಿ, ಕುಟುಂಬ ಹಾಗೂ ದೇವರ ಅಚಲವಾದ ಶ್ರದ್ಧೆ ಇಟ್ಟಿದ್ದಳು. ಅದಕ್ಕಾಗಿ ಅವಳು ಪ್ರತಿ ವರ್ಷ ಸ್ವರ್ಣಗೌರಿ ಪೂಜೆಯನ್ನು ಆಚರಿಸುತ್ತಿದ್ದಳು.
ಹೀಗಿರುವಾಗ ಒಂದು ವರ್ಷ ಸುಶೀಲಾ ವರ್ಷದಂತೆ ಪೂಜೆಗೆ ತಯಾರಿ ನಡೆಸುತ್ತಿದ್ದಾಗ, ಆಕೆಯ ಪತಿಯು ಅನಾರೋಗ್ಯಕ್ಕೆ ಪೀಡಿತನಾದ. ಅವಳ ಕುಟುಂಬಕ್ಕೂ ಆರ್ಥಿಕ ಸಂಕಷ್ಟ ಬಂದಿತು. ಈ ಸವಾಲುಗಳ ನಡುವೆಯೂ ಸುಶೀಲಾ ತನ್ನ ಭಕ್ತಿಯಿಂದ ಪೂಜೆಯ ಸಿದ್ಧತೆಯನ್ನು ಮಾಡಿದಳು. ಪೂಜೆಯನ್ನೂ ಮಾಡಿದಳು. ಶೀಲೆಯ ಈ ಭಕ್ತಿಯಿಂದ ಸಂತುಷ್ಟಳಾದ ಗೌರಿಯು ಆಕೆಯ ಮುಂದೆ ಬಂಗಾರದ ಪ್ರತಿಮೆಯ ರೂಪದಲ್ಲಿ ಕಾಣಿಸಿಕೊಂಡಳು. ಅವಳೇ ಸ್ವರ್ಣಗೌರಿ ಎಂದು ಪ್ರಸಿದ್ಧಳಾದಳು. ಆ ಗೌರಿಯು ಅವಳ ಕುಟುಂಬಕ್ಕೆ ಸಂಪತ್ತು, ಆರೋಗ್ಯ, ಸುಖ ಎಲ್ಲವನ್ನೂ ನೀಡಿದಳು. ದೂ ಕೂಡ ವ್ರತವನ್ನು ಮುಂದುವರಿಸಿ, ಅತಿಶಯವಾದ ಕೀರ್ತಿಯನ್ನೂ ಪುಣ್ಯವನ್ನೂ ಪಡೆದಳು. ಸ್ವರ್ಣಗೌರೀ ವ್ರತವು ಇದೆಲ್ಲವನ್ನೂ ನೀಡುವಂತಹ ಶ್ರೇಷ್ಠವಾದ ವ್ರತವೂ ಆಗಿದೆ. ಗಣೇಶ ಚತುರ್ಥಿಯ ಹಿಂದಿನ ದಿನ ಯಾವಾಗಲೂ ಬರುವ ಕಾರಣ ಜಗನ್ಮಾತೆಗೆ ಪೂಜೆ ಸಲ್ಲಿಸಿದ ಅನಂತರ ಗಣಪತಿಯ ಪೂಜೆಯನ್ನು ಮಾಡುವುದು ರೂಢಿಯಾಗಿದೆ.
ಗೌರ ಎಂದರೆ ಬಿಳಿ ಎಂದರ್ಥ. ಗೌರೀ ಎಂದರೆ ಬಿಳಿ ಬಣ್ಣದಿಂದ ಕೂಡಿದವಳು. ಸ್ವರ್ಣಗೌರಿಯು ಬಂಗಾರ ಹಾಗು ಬಿಳಿಯ ಬಣ್ಣದಿಂದ ಮಿಶ್ರಿತವಾದ ದೇಹವುಳ್ಳವಳಾದ ಕಾರಣ ಆ ಹೆಸರು. ಬಿಳಿಯ ಬಣ್ಣದ ಹೂವುಗಳಿಂದ ಪೂಜಿಸಬೇಕು. ಅನ್ನ, ಪಾಯಸದ ಜೊತೆ ವಿವಿಧ ಭಕ್ಷ್ಯಗಳ ನೈವೇದ್ಯವನ್ನೂ ಮಾಡಬೇಕು. ಅನಂತರ ನೈವೇದ್ಯ ಪ್ರಸಾದವನ್ನು ವ್ರತ ಮಾಡುವವರು ಮತ್ತು ವ್ರತ ಮಾಡಿದವರಿಗೆ ನೇರವಾಗಿ ಸಂಬಂಧಿಸಿದವರು ಮಾತ್ರ ಸ್ವೀಕರಿಸಬಹುದು.