ಇಂದು ದೇಶದೆಲ್ಲೆಡೆ ವಿಘ್ನ ನಿವಾರಕ, ವಿನಾಯಕ ವಿಗ್ರಹಗಳ ಪ್ರತಿಷ್ಟಾಪನೆಯ ಸಡಗರ, ಸಂಭ್ರಮ. ಬೀದಿ, ಬೀದಿಯಲ್ಲೂ, ಓಣಿ ಓಣಿಗಳಲ್ಲೂ ಗಣೇಶನ ಕೂರಿಸುವ ಮಂಟಪಗಳ ರಚನೆಯ ಕಾರ್ಯ ಭರದಿಂದ ಸಾಗಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ವಿವಿಧ ಆಕೃತಿಗಳ ವರ್ಣದ ಮೂಸಿಕ ವಾಹನನ ಮೂರ್ತಿಗಳ ಮಾರಾಟದ ಭರಾಟೆಯೂ ನಡೆದಿದೆ.
ಗಣೇಶ ಚತುರ್ಥಿ ಹಬ್ಬವು ಸೆಪ್ಟೆಂಬರ್ 7ರ ಶನಿವಾರದಿಂದ ಪ್ರಾರಂಭವಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬವನ್ನು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಗಣಪನನ್ನು ಮನೆಗೆ ಕರೆತಂದು ಮನೆಯಲ್ಲಿ ಕೂರಿಸಲಾಗುತ್ತದೆ. ಈ ಸಮಯದಲ್ಲಿ ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯವಾಗಿದೆ.
ಗಜಾನನ ಭೋಜನ ಪ್ರಿಯ, ಭಕ್ತಿ ಪ್ರಿಯ ಮಾತ್ರವಲ್ಲ, ಸಿಂಗಾರ ಪ್ರಿಯನೂ ಹೌದು. ಹೀಗಾಗಿ ಭಕ್ತರು ಗಣೇಶ ಚತುರ್ಥಿ ಬಂದರೆ ಸಾಕು ನಾನಾ ಬಗೆಯ ಅಲಂಕಾರಕ್ಕೆ ನಿಂತು ಬಿಡುತ್ತಾರೆ. ಮನೆಯನ್ನ ತಳಿರು ತೋರಣಗಳಿಂದ ಸಿಂಗರಿಸಿ, ಗಣಪ ಕೂರುವ ಕೋಣೆಯನ್ನ ಹಾಗೂ ಗೂಡನ್ನ ವಿದ್ಯುತ್ ಅಲಂಕಾರದಿಂದ ಹಿಡಿದು ತಮಗೆ ತೃಪ್ತಿಯಾಗುಷ್ಟು ಅಲಂಕಾರದಿಂದ ಅಂದಗೊಳಿಸುತ್ತಾರೆ. ಗಣೇಶನನ್ನು ಪೂಜೆ ಮಾಡಬೇಕಾದರೇ ಈ ತಪ್ಪು ಯಾವತ್ತೂ ಮಾಡಬಾರದು. ಸಾಮಾನ್ಯವಾಗಿ ಗಣಪನ ಮುಂದೆ ಸಾಕಷ್ಟು ತಿಂಡಿಗಳನ್ನು ಇಡುತ್ತಾರೆ.
ಪೂಜೆಗೂ ಕೂಡ ಬಗೆಯ ಬಗೆಯ ಫಲಪುಷ್ಪಗಳನ್ನು ಅರ್ಪಿಸುತ್ತಾರೆ. ನಮಗೆ ಎಂತಹದ್ದೇ ಕಷ್ಟಗಳು ಇದ್ದರು ಕೂಡ ಗಣೇಶ ಅದನ್ನು ಪರಿಹರಿಸುತ್ತಾನೆ ಅಂತ ನಂಬಲಾಗಿದೆ. ಇದೇ ಗರಿಕೆ ಪ್ರಿಯ ಗಣಪನಿಗೆ 21 ಗರಿಕೆಗಳನ್ನು ಇಡುವುದು ವಾಡಿಕೆ. ಆದರೆ ಯಾವುದೇ ಕಾರಣಕ್ಕೂ ಒಂದು ದಳದ ಗರಿಯನ್ನು ಇಡಬಾರದು. ಬದಲಿಗೆ ನಾವು ಗಣೇಶನ ಮುಂದೆ 3 ದಳಗಳು ಇರುವಂತಹ ಗರಿಕೆಗಳನ್ನು ಇಡಬೇಕು. ಈ ಮೂರು ದಳದ ಗರಿಕೆಯ ಸಂಕೇತ ಎಂದರೆ ಶಿವ, ಶಕ್ತಿ ಹಾಗೂ ಗಣಪ ಎಂದರ್ಥ. ಮೂರು ದಳದ ಗರಿಕೆ ಸಿಗಲಿಲ್ಲ ಅಂದ್ರೆ ಐದು ಗರಿಕೆಗಳು ಇರುವಂತ ಗರಿಕೆಯನ್ನು ಇಡಬಹುದಾಗಿದೆ. ಇದು ಬ್ರಹ್ಮ, ವಿಷ್ಣು, ಶಿವ, ಶಕ್ತಿ ಹಾಗೂ ಗಣಪ ಎಂದು ಹೇಳಲಾಗಿದೆ.