ಶಿವನ ಮತ್ತು ಪಾರ್ವತಿಯ ಪುತ್ರನಾದ ಗಣೇಶನಿಗೆ ಸಿಹಿತಿಂಡಿಗಳ ದೌರ್ಬಲ್ಯವಿತ್ತು. ಯಾರಾದರೂ ಗಜಮುಖನಿಗೆ ಸಿಹಿತಿಂಡಿಗಳನ್ನು ಅರ್ಪಿಸಿದರೆ ಅಥವಾ ನೀಡಿದರೆ ತಿನ್ನುವುದನ್ನು ತಡೆದುಕೊಳ್ಳಲು ಗಣೇಶನಿಗೆ ಸಾಧ್ಯವಿರಲಿಲ್ಲ. ಒಮ್ಮೆ ಭಕ್ತನೊಬ್ಬ ಹಲವು ಸಿಹಿ ತಿಂಡಿಗಳನ್ನು ವಿನಾಯಕನಿಗೆ ನೀಡುತ್ತಿದ್ದಂತೆ ಹೆಚ್ಚು ಖುಷಿ ಪಟ್ಟ ಭಗವಂತ, ಇಡೀ ದಿನ ಅಲ್ಲಿಯೇ ಇದ್ದು ಹೆಚ್ಚಿನ ಸಿಹಿತಿಂಡಿಗಳನ್ನು ಸೇವಿಸಿದನು. ರಾತ್ರಿ ಬಂದ ನಂತರ ಗಣೇಶನು ಉಳಿದ ಸಿಹಿತಿಂಡಿಗಳನ್ನು ಹಿಡಿದುಕೊಂಡು ನಿಧಾನವಾಗಿ ಮನೆಗೆ ನಡೆದನು. ಆಗಲೇ ತುಂಬಾ ಸಿಹಿ ತಿಂಡಿಗಳನ್ನು ತಿಂದಿದ್ದರಿಂದ ಗಣೇಶನ ಹೊಟ್ಟೆ ತುಂಬಿತ್ತು. ಈ ವೇಳೆ, ಹಿಂದಕ್ಕೆ ನಡೆಯುತ್ತಿದ್ದಾಗ ವಿನಾಯಕನು ಎಡವಿ ಕೆಳಗೆ ಬಿದ್ದನು. ಎಲ್ಲಾ ಸಿಹಿತಿಂಡಿಗಳು ನೆಲದ ಮೇಲೆ ಹರಡಿ ಚೆಲ್ಲಿಹೋಗಿದ್ದಲ್ಲದೆ ಭಗವಂತ ತೊಟ್ಟಿದ್ದ ಉಡುಪು ಹರಿದುಹೋಗಿತ್ತು.
ನೆಲದ ಮೇಲೆ ಬಿದ್ದು ಹೋಗಿದ್ದ ಗಣೇಶನು ಮೇಲೆ ಏಳುತ್ತಿದ್ದಾಗಲೇ ಮುಜುಗರ ಅನುಭವಿಸುತ್ತಿದ್ದನು. ಮೇಲೆ ಏಳುತ್ತಿದ್ದಂತೆ ಧೂಳು ಕೊಡವಿಕೊಂಡು ತನ್ನ ಬಳಿ ಇದ್ದ ಎಲ್ಲಾ ಸಿಹಿತಿಂಡಿಗಳನ್ನು ಸಂಗ್ರಹಿಸಿದನು. ಯಾರೂ ಅವನನ್ನು ನೋಡಲಿಲ್ಲ ಎಂದು ಆಶಿಸುತ್ತಾ ಸುತ್ತಲೂ ನೋಡಿದ. ದುರದೃಷ್ಟವಶಾತ್ ಚಂದ್ರ ದೇವ ಎಲ್ಲವನ್ನೂ ನೋಡಿದ್ದ. ಆ ಕಾಲದಲ್ಲಿ ಎಲ್ಲಾ ದಿನಗಳಲ್ಲಿ ಚಂದ್ರನು ಪೂರ್ಣ ಚಂದಿರನಾಗಿಯೇ ಇರುತ್ತಿದ್ದನು. ಈಗಿನ ಕಾಲದ ತರ ಅಮಾವಾಸ್ಯೆ , ಹುಣ್ಣಿಮೆ ಆ ವೇಳೆ ಇರಲಿಲ್ಲ. ಈ ಹಿನ್ನೆಲೆ ಮಡಕೆ ಹೊಟ್ಟೆಯನ್ನು ಹೊಂದಿದ್ದ ಗಣೇಶನು ಎಡವಿ ಬಿದ್ದು, ಒದ್ದಾಡಿದ್ದನ್ನು ನೋಡಿದ ಚಂದ್ರ ಬಿದ್ದು ಬಿದ್ದು ನಗಾಡಿದ. ಚಂದ್ರ ದೇವ ತನ್ನನ್ನು ತುಂಬಾ ಸುಂದರ ಎಂದು ಮೊದಲಿನಿಂದಲೂ ಭಾವಿಸಿದ. ಜತೆಗೆ, ಮಡಕೆ ಹೊಟ್ಟೆಯನ್ನು ಹೊಂದಿದ್ದ ಗಣೇಶನ ಪಾದಗಳನ್ನು ಮತ್ತು ಆನೆಯ ತಲೆಯನ್ನು ನೋಡಿದರೆ ತಮಾಷೆಯಾಗಿ ಕಾಣುತ್ತದೆ ಎಂದು ಅವನು ಯಾವಾಗಲೂ ಭಾವಿಸುತ್ತಿದ್ದನು. ಇದೇ ರೀತಿ, ಗಣೇಶ ಕೆಳಕ್ಕೆ ಬಿದ್ದು ಮೇಲಕ್ಕೆ ಏಳುತ್ತಿದ್ದಂತೆ ತನ್ನ ಮುಖದ ಮೇಲಿದ್ದ ಕಣ್ಣೀರನ್ನು ಚಂದ್ರನು ಒರೆಸಿಕೊಂಡನು.
ಚಂದ್ರ ದೇವ ಅವನನ್ನು ನೋಡಿ ನಗುತ್ತಿರುವುದನ್ನು ನೋಡಿದ ಗಣೇಶನಿಗೆ ಕೋಪ ಬಂದಿತು. ಚಂದ್ರ ಬಂದು ನನಗೆ ಸಹಾಯ ಮಾಡುತ್ತಿಲ್ಲ. ಬದಲಾಗಿ ತನ್ನನ್ನು ನೋಡಿ ನಗುತ್ತಿದ್ದಾನೆ ಎಂದು ಗಣೇಶ ರೇಗಿ ಹೋದ. ಚಂದ್ರ ದೇವ ನಗುವುದನ್ನು ನಿಲ್ಲಿಸಿದ ತಕ್ಷಣ ಗಣೇಶನು ಕೋಪದಿಂದ ʻಚಂದ್ರ!’ ಎಂದು ಕೂಗಿದನು. ನೀನು ನನ್ನನ್ನು ನೋಡಿ ನಗುತ್ತಿದ್ದೀಯ! ನೀನು ತುಂಬಾ ಸುಂದರವಾಗಿದ್ದೀಯ ಎಂದು ನೀನು ಭಾವಿಸಿದ್ದೀಯ! ಇನ್ನು ಮುಂದೆ ನೀವು ಆಕಾಶದಿಂದ ಕಣ್ಮರೆಯಾಗುತ್ತೀಯ ಮತ್ತೆ ನಿಮ್ಮ ಮುಖವನ್ನು ಎಂದಿಗೂ ತೋರಿಸದಿರಿ ಎಂದು ನಾನು ನಿಮ್ಮನ್ನು ಶಪಿಸುತ್ತೇನೆ ಎಂದು ಭಗವಂತ ಹೇಳಿದ.
ಗಣೇಶನ ಶಾಪವನ್ನು ಕೇಳಿದ ಚಂದ್ರದೇವ ನಡುಗಿ ಹೋದ. ಓ ದೇವರೇ! ನನ್ನನ್ನು ಯಾರೂ ನೋಡಲು ಸಾಧ್ಯವಾಗುವುದಿಲ್ಲವೇ. ಈ ಶಿಕ್ಷೆ ತುಂಬಾ ಕಠಿಣವಾಗಿದೆ ಎಂದು ಚಂದ್ರದೇವ ತಲೆ ಅಲ್ಲಾಡಿಸಿದ. ತಕ್ಷಣವೇ ಗಣೇಶನನ್ನು ಭೇಟಿ ಮಾಡಿದ ಚಂದ್ರದೇವ, ದೇವರೇ, ನನ್ನನ್ನು ಕ್ಷಮಿಸಿಬಿಡು. ನನಗೆ ಹೆಚ್ಚು ಅಹಂಕಾರವಿತ್ತು. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ದೇವರೇ! ಎಂದು ಪರಿ ಪರಿಯಾಗಿ ಚಂದ್ರ ದೇವ ಗಣೇಶನನ್ನು ಬೇಡಿಕೊಂಡ.
ಬಳಿಕ “ಚಂದ್ರ, ನನ್ನ ಮಾತುಗಳನ್ನು ನಾನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಗಣೇಶ ಚಂದ್ರನಿಗೆ ಹೇಳಿದ. ಇದರಿಂದ ಚಂದ್ರನ ಮುಖ ಸಪ್ಪಗಾಗಿದ್ದನ್ನು ಸಹ ಗಣೇಶ ನೋಡಿದ. “ಆದರೆ, ಕೇಳು ಚಂದ್ರ, ನಾನು ಶಾಪವನ್ನು ಕಡಿಮೆ ಮಾಡುತ್ತೇನೆ. ನಿನ್ನ ಮುಖ ದಿನೇ ದಿನೇ ನಿಧಾನವಾಗಿ ಕಡಿಮೆಯಾಗುತ್ತದೆ. ಒಂದು ದಿನ ಮಾತ್ರ ನೀನು ಆಕಾಶದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬಳಿಕ, ನಿನ್ನ ಮುಖ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ. ಅಲ್ಲದೆ, ಹದಿನೈದನೇ ದಿನ ನಿನ್ನ ಮುಖ ಸಂಪೂರ್ಣವಾಗಿ ಹೊಳೆಯುತ್ತದೆ” ಎಂದು ವಿನಾಯಕ ಹೇಳಿದನು. ಇದನ್ನು ಕೇಳಿ ಖುಷಿಯಾದ ಚಂದ್ರ ಗಣೇಶನಿಗೆ ಧನ್ಯವಾದ ತಿಳಿಸಿದ. ಆದರೆ, ಇಷ್ಟಕ್ಕೆ ಸುಮ್ಮನಾಗದ ಗಣೇಶ, ಇನ್ನೂ ಒಂದು ಇದೆ ವಿಚಾರ ಇದೆ ಎಂದು ತನ್ನ ಮಿನುಗುತ್ತಿರುವ ಕಣ್ಣುಗಳಿಂದ ಹೇಳಿದ.
ಬೇರೆ ಯಾವುದಾದರೂ ಷರತ್ತುಗಳನ್ನು ಹಾಕಬಹುದೆಂದು ಚಂದ್ರ ಮತ್ತೆ ಗಾಬರಿಯಿಂದಲೇ ಗಣೇಶನತ್ತ ನೋಡಿದ. ಇದನ್ನು ನೋಡಿದ ಗಣೇಶ, ಆ ರೀತಿಯ ಭಯ ಬೇಡ. ನೀನು ಚತುರ್ಥಿಯಂದು ನನ್ನನ್ನು ನೋಡಿ ನಕ್ಕಿದ್ದೀಯ. ಈ ಹಿನ್ನೆಲೆ ಈ ದಿನ ನಿನ್ನನ್ನು ಯಾರಾದರೂ ನೋಡಿದರೆ ಅವರಿಗೆ ಕೆಲವು ತೊಂದರೆಗಳಾಗುತ್ತವೆ ಹಾಗೂ “ಕಳ್ಳ” ಎಂಬ ಅಪವಾದ ಬರುತ್ತದೆ ಎಂದು ಹೇಳಿದ. ಆದರೆ, ಭಯ ಬೇಡ, ನೀನು ಕೃಷ್ಣ ಶಮಂತಕ ಮಣಿ ಕಥೆಯನ್ನು ಕೇಳಿದರೆ ಈ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ವಿನಾಯಕ ಹೇಳಿದ. ಈ ಹಿನ್ನೆಲೆ ಆ ದಿನದಿಂದಲೇ ಅಮಾವಾಸ್ಯೆಗೆ ಮುನ್ನ ಚಂದ್ರನ ಗಾತ್ರ ಕಡಿಮೆಯಾಗುತ್ತಾ ಹೋಗುತ್ತದೆ. ಜತೆಗೆ, ಹುಣ್ಣಿಮೆ ಹತ್ತಿರ ಬಂದಾಗಲೆಲ್ಲ ಚಂದ್ರನ ಗಾತ್ರ ದೊಡ್ಡದಾಗುತ್ತಾ ಹೋಗುತ್ತದೆ ಎಂದು ನಂಬಲಾಗಿದೆ.