ಕಲಬುರಗಿ ಮಹಾನಗರದ ವಿಕಾಸ ಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ, ಮಂಗಳವಾರ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಐತಿಹಾಸಿಕ ಸಚಿವ ಸಂಪುಟ ಸಭೆಗೆ ಕ್ಷಣಗಣನೆ ಆರಂಭವಾಗಿದೆ. ಇದು ಸಿದ್ದರಾಮಯ್ಯ ಸರ್ಕಾರದ 2024ನೇ ಸಾಲಿನ 19ನೇ ಸಂಪುಟ ಸಭೆ ಆಗಿದೆ.
2014ರ ನವೆಂಬರ್ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲಬುರಗಿಯಲ್ಲಿ ಮೊದಲ ಸಂಪುಟ ಸಭೆ ನಡೆಸಿ ಗಮನ ಸೆಳೆದಿದ್ದರು. ಇದೀಗ ಅವರ ನೇತೃತ್ವದಲ್ಲೇ 2ನೇ ಬಾರಿಗೆ ಸಂಪುಟ ಸಭೆ ನಡೆಯುತ್ತಿದೆ. ಹೀಗಾಗಿ ಒಂದು ದಶಕದ ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಿಂದಾಗಿ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ವ್ಯಾಪ್ತಿಯ ಕಲ್ಯಾಣ ಕರ್ನಾಟಕ ಭಾಗದ ಜನರ ನಿರೀಕ್ಷೆ ಗರಿಗೆದರಿದೆ.
ವಿಮೋಚನೆಯ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿರುವ ಐತಿಹಾಸಿಕ ದಿನವಾದ ಸೆಪ್ಟೆಂಬರ್ 17ರಂದು ನಡೆಯಲಿರುವ ಸಭೆಯನ್ನು ಐತಿಹಾಸಿಕ ಸಭೆ ಎಂದೇ ಬಣ್ಣಿಸಲಾಗುತ್ತಿದೆ. ಸೆಪ್ಟೆಂಬರ್ 17ರ ದಿನ ಬೆಳಗ್ಗೆ 9ಕ್ಕೆ ಕಲ್ಯಾಣ ಕರ್ನಾಟಕ ಧ್ವಜಾರೋಹಣ ನೆರವೇರಿಸಿ ಪರೇಡ್ನಲ್ಲಿ ಪಾಲ್ಗೊಳ್ಳುವ ಸಿಎಂ ಸಿದ್ದರಾಮಯ್ಯ ನಂತರ ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ನಡೆಸಲಿದ್ದಾರೆ. ಇದಕ್ಕಾಗಿ ಅವರು ಒಂದು ದಿನ ಮುಂಚಿತವಾಗಿಯೇ ಅಂದರೆ ಸೋಮವಾರ ಮಧ್ಯಾಹ್ನವೇ ವಿಶೇಷ ವಿಮಾನದಲ್ಲಿ ಬಂದಿಳಿಯಲಿದ್ದಾರೆ.
ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸದಸ್ಯರು ಆಗಮಿಸುವ ಹಿನ್ನೆಲೆಯಲ್ಲಿ ಶಿಷ್ಟಾಚಾರದಲ್ಲಿ ಲೋಪವಾಗದಂತೆ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ನೇತೃತ್ವದಲ್ಲಿ ಕೆಲಸ ಸಾಗಿದೆ. ಸಂಪುಟ ಸಭೆಯ ದಿನ ಕಲಬುರಗಿ ವಿಕಾಸ ಭವನಕ್ಕೆ ಸಚಿವ ಸಂಪುಟದ ಸದಸ್ಯರಲ್ಲದೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಇಲಾಖಾ ಕಾರ್ಯದರ್ಶಿಗಳು ಮತ್ತು ಮುಖ್ಯಸ್ಥರು ಆಗಮಿಸುವುದರಿಂದ ಎಲ್ಲರಿಗೂ ಶಿಷ್ಟಾಚಾರದಂತೆ ವಸತಿ, ಸಾರಿಗೆ, ಊಟೋಪಚಾರ ಕಲ್ಪಿಸಲು ಭರದ ಸಿದ್ಧತೆಗಳು ಸಾಗಿವೆ. ಸೆಪ್ಟೆಂಬರ್ 16 ಮತ್ತು 17ರ ಕಾರ್ಯಕ್ರಮ ಎಲ್ಲವೂ ಸುಲಲಿತವಾಗುವಂತೆ ಜಿಲ್ಲಾಡಳಿತ ಅಧಿಕಾರಿಗಳ ತಂಡ ರಚಿಸಿಕೊಂಡಿದ್ದಾರೆ. ರಸ್ತೆಗಳ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ, ಗುಂಡಿ ಮುಚ್ಚುವ ಕೆಲಸ ಭರದಿಂದ ಸಾಗಿದೆ.
1982ರಲ್ಲಿ ಮೊದಲ ಸಂಪುಟ ಸಭೆ
ಕಲಬುರಗಿಯಲ್ಲಿ ಮೊದಲ ಸಂಪುಟ ಸಭೆಯನ್ನು 1982ರಲ್ಲಿ ಆರ್.ಗುಂಡೂರಾವ್ ಮುಖ್ಯಮಂತ್ರಿಗಳಾಗಿದ್ದಾಗ ನಡೆಸಲಾಗಿತ್ತು. ಇದಾದ ಬಳಿಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2008ರ ಸೆಪ್ಟೆಂಬರ್ 26, ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದಾಗ 2014ರ ನವೆಂಬರ್ 18ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲಾಗಿತ್ತು.