ವಿಶ್ವವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆ ನಡುವೆ ಗಲಾಟೆಯಾಗಿ ‘ಕಂಜನ್’ ಆನೆ ಅರಮನೆಯಿಂದ ರಸ್ತೆಗೆ ಓಡಿ ಬಂದ ಘಟನೆ ಶುಕ್ರವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ನಡೆದಿದೆ. ರಾತ್ರಿ ಊಟ ಮಾಡುವ ವೇಳೆ ‘ಧನಂಜಯ’ ಮತ್ತು ‘ಕಂಜನ್’ ಆನೆ ನಡುವೆ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಊಟ ಮಾಡುವ ವೇಳೆ ಆರಂಭವಾದ ಗಲಾಟೆಯಿಂದ ಕಂಜನ್ ಆನೆ ಅರಮನೆಯಿಂದ ರಸ್ತೆಗೆ ಓಡಿ ಬಂದಿದೆ. ಈ ವೇಳೆ ಧನಂಜಯ ಎಂಬ ಮತ್ತೊಂದು ಆನೆ ಕಂಜನ್ ಆನೆಯನ್ನು ಓಡಿಸಿಕೊಂಡು ಹೋಗಿದೆ. ಆನೆಯು ಏಕಾಏಕಿ ಅರಮನೆಯಿಂದ ಹೊರಗೆ ಓಡಿ ಬಂದ ಹಿನ್ನೆಲೆ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾವುತನಿಲ್ಲದ ಕಂಜನ್ ಆನೆಯನ್ನು ಧನಂಜಯ ಆನೆ ಅರಮನೆಯಿಂದ ಹೊರಗೆ ಓಡಿಸಿಕೊಂಡು ಬಂದ ವಿಡಿಯೋ ವೈರಲ್ ಆಗಿದ್ದು, ಧನಂಜಯ ಆನೆಯ ಮಾವುತನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಅರಮನೆ ಜಯ ಮಾರ್ತಾಂಡ ಮುಖ್ಯದ್ವಾರದ ಪಕ್ಕದ ಕೋಡಿ ಸೋಮೇಶ್ವರ ದೇಗುಲದ ದ್ವಾರದಿಂದ ಹೊರಬಂದ ಆನೆ, ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತಗೆ ಎಂಟ್ರಿಕೊಟ್ಟಿದೆ. ಏಕಾಏಕಿ ಆನೆಯ ಆಗಮನದಿಂದ ಗಾಬರಿಯಾದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಆನೆಗಳನ್ನು ನಿಯಂತ್ರಿಸಲು ಹರಸಾಹಸಪಟ್ಟ ಮಾವುತರು ಮತ್ತು ಅಧಿಕಾರಿಗಳು ಕೊನೆಗೆ ಅವನ್ನು ಒಳಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ಮಾವುತರು ಹಾಗೂ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ ಎಂದು ಹೇಳಲಾಗುತ್ತಿದೆ.