ಬೆಂಗಳೂರು : ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯರಗಳ್ಳಿಯಲ್ಲಿ ಸಾವಿರಾರು ಮರಗಳ ಕಡಿತಲೆ ಆಗಿದೆ ಎನ್ನುಲಾದ ಪ್ರಕರಣದ ಸಮಗ್ರ ತನಿಖೆ ನಡೆಸಿ, ಕಾನೂನು ರೀತ್ಯ ಸೂಕ್ತ ಕ್ರಮ ಜರುಗಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಬಂದ ವರದಿ ಮತ್ತು ಕಚೇರಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಈ ಸಂಬಂಧ ಸೂಚನೆ ನೀಡಿರುವ ಅವರು, ಅತ್ತಿಹಳ್ಳಿ ಸಮೀಪದ ಯರಗಳ್ಳಿಯಲ್ಲಿ ಮರಗಳನ್ನು ಕತ್ತರಿಸಿ ರಾಶಿ ಹಾಕಿರುವುದು ಜಿಪಿಎಸ್ ಚಿತ್ರದಿಂದ ವೇದ್ಯವಾಗುತ್ತಿದ್ದು ಈ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಂಡದಿಂದ ತನಿಖೆ ನಡೆಸಿ ಕ್ರಮ ಜರುಗಿಸಲು ಸೂಚಿಸಿದ್ದಾರೆ.
ಸರ್ಕಾರಿ, ಅರಣ್ಯ ಅಥವಾ ಪರಿಭಾವಿತ ಅರಣ್ಯದಲ್ಲಿ ಮರ ಕಡಿದಿದ್ದಲ್ಲಿ ಅರಣ್ಯ ಅಪರಾಧ ಪ್ರಕರಣ ದಾಖಲಿಸಿ ನಿಯಮಾನುಸಾರ ಕ್ರಮ ಜರುಗಿಸಲು, ಪಟ್ಟಾ ಜಮೀನಿನಲ್ಲಿ ಅನುಮತಿ ಪಡೆದು ಮರ ಕಡಿದಿದ್ದರೆ ಇಷ್ಟೊಂದು ಪ್ರಮಾಣದ ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು; ಒಂದೊಮ್ಮೆ ಮರ ಕಡಿತಲೆಗೆ ಅನುಮತಿಯೇ ಇಲ್ಲದೆ ಅಕ್ರಮ ಕಡಿತಲೆ ಮಾಡಿದ್ದಲ್ಲಿ ಈ ವಲಯದ ಅರಣ್ಯ ಸಿಬ್ಬಂದಿಯ ನಿರ್ಲಕ್ಷ್ಯವೂ ಸೇರಿದಂತೆ ಸಮಗ್ರ ತನಿಖೆ ನಡೆಸಿ, ಕೈಗೊಂಡ ಕ್ರಮದ ವಿವರದೊಂದಿಗೆ 3 ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸಲು ಸೂಚಿಸಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc