ಮನರಂಜನೆ ಅಂತ ಬಂದಾಗ ಕನ್ನಡಿಗರ ಮೊದಲ ಆಯ್ಕೆಯೇ ‘ಸ್ಟಾರ್ ಸುವರ್ಣ’. ಆಸೆ, ನಿನ್ನಜೊತೆ ನನ್ನಕಥೆ, ನೀನಾದೆ ನಾ, ರೇಣುಕಾ ಯಲ್ಲಮ್ಮ, ಎಡೆಯೂರು ಶ್ರೀ ಸಿದ್ಧಲಿಂಗೇಶ್ವರದಂತಹ ಧಾರಾವಾಹಿಗಳು ಈಗಾಗಲೇ ಪ್ರೇಕ್ಷಕರ ಮನಗೆದ್ದು ಯಶಸ್ಸಿನ ಮೆಟ್ಟಿಲೇರಿದೆ. ಈ ಸಾಲಿಗೆ ಸೇರಲಿರುವ ಹೊಸ ಕಥೆ ‘ಶಾರದೆ’.
ಜಗತ್ತಿನ ಎಲ್ಲಾ ಪ್ರೀತಿಯನ್ನು ಧಾರೆಯೆರೆಯೋ ನಿಷ್ಕಲ್ಮಶ ಜೀವ ಅಂದ್ರೆ ಅದು ‘ಅಮ್ಮ’. ಈ ಕಥೆಯಲ್ಲೂ ಅಷ್ಟೇ ನಾಯಕಿ ಶಾರದಾ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಯಾರೋ ಮಾಡಿದ ಕುತಂತ್ರದಿಂದ ಬಡತನದಲ್ಲಿ ಬೆಳೆದಿರುತ್ತಾಳೆ. ಗಂಡ ಮಾಡಿದ ಮೋಸದಿಂದಾಗಿ ಎಷ್ಟೇ ನೋವಿದ್ದರೂ ಈಕೆ ತನ್ನ ಮಗಳಿಗಾಗಿ ಹೋರಾಡುತ್ತಾ ಜೀವನ ನಡೆಸುತ್ತಿರ್ತಾಳೆ.
ಇನ್ನೊಂದೆಡೆ ಕೂಡು ಕುಟುಂಬದಲ್ಲಿ ಬೆಳೆದಿರೋ ನಾಯಕ ಸಿದ್ದಾರ್ಥ್, ಇಷ್ಟವಿಲ್ಲದಿದ್ದರೂ ಅತ್ತೆ ಮಗಳಾದ ಜ್ಯೋತಿಕಾಳ ಜೊತೆ ಮದುವೆಯಾಗಲು ತಯಾರಾಗಿರ್ತಾನೆ. ಆದರೆ ಈ ಮನೆಗೆ ಮನೆಕೆಲಸದವಳಾಗಿ ಬರೋ ಶಾರದಾಳ ಬದುಕಲ್ಲಿ ಮುಂದೆ ಏನೆಲ್ಲಾ ತಿರುವುಗಳು ಬರಲಿದೆ? ಕಷ್ಟ, ನೋವು, ಅವಮಾನಗಳನ್ನೇ ಎದುರಿಸುತ್ತಾ ಬಂದಿರೋ ಶಾರದೆಗೆ ತನ್ನ ಜನ್ಮರಹಸ್ಯದ ಬಗ್ಗೆ ತಿಳಿಯುತ್ತಾ? ಒಬ್ಬಂಟಿಯಾಗಿ ಬದುಕುತ್ತಿರೋ ಶಾರದೆಯ ಬಾಳಲ್ಲಿ ಪ್ರೀತಿಯ ಹೂ ಚಿಗುರಲಿದೆಯಾ? ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
ಇನ್ನು ಈ ಸೀರಿಯಲ್ ನಲ್ಲಿ ಅನುಭವಿ ಕಲಾವಿದರ ದೊಡ್ಡ ತಂಡವಿದ್ದು, ನಾಯಕಿಯಾಗಿ ಚೈತ್ರ ಸಕ್ಕರಿ, ನಾಯಕನಾಗಿ ಸೂರಜ್ ಹೂಳಲು ಹಾಗೂ ಮುಖ್ಯ ಪಾತ್ರದಲ್ಲಿ ದಿವ್ಯ ಸುರೇಶ್, ಸ್ವಾತಿ, ಅನಂತವೇಲು, ಅಂಬುಜಾ, ರಾಜೇಶ್ ಧ್ರುವ ಸೇರಿದಂತೆ ಇನ್ನು ಅನೇಕರು ಅಭಿನಯಿಸುತ್ತಿದ್ದಾರೆ.
ಪುರಾಣಿಕ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಯನ್ನು ಸುನಿಲ್ ಪುರಾಣಿಕ್ ಹಾಗು ಸಾಗರ್ ಪುರಾಣಿಕ್ ರವರು ನಿರ್ಮಿಸುತ್ತಿದ್ದು, ಧರಣಿ ಜಿ ರಮೇಶ್ ನಿರ್ದೇಶಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮ ‘ಶಾರದೆ’ ಧಾರಾವಾಹಿಗೆ ಸಂಗೀತವನ್ನು ಸಂಯೋಜಿಸಿದ್ದು, ನಿರ್ದೇಶಕ ಪವನ್ ಒಡೆಯರ್ ಬರೆದಿರುವ ಸಾಹಿತ್ಯಕ್ಕೆ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ.
ಸದಾ ಹೊಸತನಕ್ಕಾಗಿ ತುಡಿಯುವ ಸ್ಟಾರ್ ಸುವರ್ಣದಲ್ಲಿ ಸಹನೆಯ ಸಾರಥಿಯಾಗಿ, ಮಮತೆಯ ಮಡಿಲಾಗಿ ನಿಮ್ಮ ಮನೆ ಮನೆಗೆ ಬರ್ತಿದ್ದಾಳೆ ‘ಶಾರದೆ’ ಇದೇ ಮಾರ್ಚ್ 17, ಅಂದ್ರೆ ಮುಂದಿನ ಸೋಮವಾರದಿಂದ ಪ್ರತಿದಿನ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.
ಕಿರಣ್ ಚಂದ್ರ, ಗ್ಯಾರಂಟಿ ನ್ಯೂಸ್ ಬೆಂಗಳೂರು.