ಭಾರತೀಯ ಚಿತ್ರರಂಗದ ಮಾಂತ್ರಿಕ ವ್ಯಕ್ತಿತ್ವ, ಕರ್ನಾಟಕ ರತ್ನ ಡಾ. ರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ವಿಶೇಷ ಗೌರವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಏಪ್ರಿಲ್ 24ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ, ಡಾ.ರಾಜ್ಕುಮಾರ್ಗೆ ಭಾವಪೂರ್ಣ ನಮನ ಸಲ್ಲಿಸಲಾಯಿತು.
ಪಂದ್ಯ ಆರಂಭಕ್ಕೂ ಮೊದಲು ಸ್ಟೇಡಿಯಂನಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ತಮ್ಮ ಮೊಬೈಲ್ ಟಾರ್ಚ್ಗಳನ್ನು ಆನ್ ಮಾಡಿ, ‘ನಾವಾಡುವ ನುಡಿಯೇ ಕನ್ನಡ ನುಡಿ’ ಸೇರಿದಂತೆ ಡಾ. ರಾಜ್ಕುಮಾರ್ ಅಭಿನಯದ ಅಮರ ಗೀತೆಗಳನ್ನು ಕೇಳಿಸಿ ಆತನಿಗೆ ಗೌರವ ಸಲ್ಲಿಸಿದರು. ಈ ಕ್ಷಣಗಳು ಅಭಿಮಾನಿಗಳಿಗೆ ಭಾವುಕತೆಯ ಸ್ಮರಣೆ ಮೂಡಿಸಿದವು. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಐಪಿಎಲ್ 2025ರ ಹಂಗಾಮಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಆರಂಭ ನೀಡಿದ್ದರೂ ತವರಿನಲ್ಲಿ ಜಯ ಸಿಗದಿರುವುದು ಅಭಿಮಾನಿಗಳಲ್ಲಿ ಆಘಾತ ಉಂಟುಮಾಡಿದೆ. ಈವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಆರ್ಸಿಬಿ ಸೋಲು ಅನುಭವಿಸಿದೆ. ಆದರೆ ಕೋಲ್ಕತ್ತಾ, ಚೆನ್ನೈ, ಮುಂಬೈ, ರಾಜಸ್ಥಾನ್ ಹಾಗೂ ಪಂಜಾಬ್ ನೆಲದಲ್ಲಿ ಜಯ ಗಳಿಸುವಲ್ಲಿ ಯಶಸ್ವಿಯಾಗಿದೆ.
ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ಈ ಹಂಗಾಮಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಎಂಟು ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನಷ್ಟೇ ದಾಖಲಿಸಿರುವ ಈ ತಂಡ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಆರ್ಸಿಬಿ ಹಾಗೂ ರಾಜಸ್ಥಾನ್ ನಡುವೆ ಇದುವರೆಗೆ 30 ಪಂದ್ಯಗಳು ನಡೆದಿದ್ದು, RCB 16 ಪಂದ್ಯಗಳಲ್ಲಿ ಹಾಗೂ ರಾಜಸ್ಥಾನ್ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಅಣ್ಣಾವ್ರ ಜನ್ಮದಿನದ ಸ್ಮರಣೆ
ರಾಜ್ಕುಮಾರ್ ಅವರ ಜನ್ಮದಿನದ ಅಂಗವಾಗಿ ಹಲವಾರು ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇರುವ ಅವರ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ರಾಜ್, ಅಂಬರೀಷ್ ಮತ್ತು ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಂಘಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಅನ್ನದಾಸೋಹ, ರಕ್ತದಾನ ಶಿಬಿರಗಳು ನಡೆಯಿದ್ದು, ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು.