ಚಿತ್ರದುರ್ಗದ ರೇಣುಕಾಸ್ವಾಮಿಯ ಪುತ್ರನ ನಾಮಕರಣ ನೆರವೇರಿತು. ಹತ್ಯೆಯಾದ ದಿನದಿಂದ ಇಲ್ಲಿಯವರೆಗೂ ರೇಣುಕಾಸ್ವಾಮಿ ನಿವಾಸದಲ್ಲಿ ಸೂತಕದ ಛಾಯೆ ಆವರಿಸಿತ್ತು. ಆದರೆ ಇಂದು ಜ್ಯೂನಿಯರ್ ರೇಣುಕಾಸ್ವಾಮಿ ಎಂಟ್ರಿಯಿಂದ ಮನೆಯಲ್ಲಿ ಸಂಭ್ರಮ ಕಳೆ ಕಟ್ಟಿದೆ. ಕಣ್ಣಿರಲ್ಲಿ ಕೈತೊಳೆದಿದ್ದ ಕುಟುಂಬಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ.
ಮೃತ ರೇಣುಕಾಸ್ವಾಮಿ ಹಾಗೂ ಸಹನಾ ದಂಪತಿಗಳಿಗೆ ಗಂಡು ಮಗು ಜನಿಸಿದ್ದು, ಮನೆಗೆ ಪುಟಾಣಿ ಬಾಲಕನ ಎಂಟ್ರಿಯಾಗಿತ್ತು. ಅಲ್ಲದೆ ಐದು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಮನೆಗೆ ಆಗಮಿಸಿದ್ದ ಮೊಮ್ಮಗನಿಗೆ ನಾಮಕರಣ ಮಹೋತ್ಸವ ಕೂಡಾ ಸಡಗರದಿಂದ ನೆರವೇರಿಸಲಾಯಿತು.
ಮಗುವಿನ ಆಗಮನ ಕುಟುಂಬದಲ್ಲಿ ಸಂತೋಷ ಮೂಡಿಸಿದರೂ, ಹಿಂದಿನ ನೋವನ್ನು ಮರೆತೀರುವುದಿಲ್ಲ ಎಂದು ಕಾಶಿನಾಥ ಶಿವನಗೌಡ್ರು ಭಾವುಕರಾದರು. “ನನ್ನ ಮಗಳು, ರೇಣುಕಾಸ್ವಾಮಿ ಮಗುವಿಗೆ ಅತ್ತೆಯಾಗಬೇಕಾಗಿತ್ತು. ಸೋದರತ್ತೆಯಿಂದ ಶಾಸ್ತ್ರಪ್ರಕಾರ ನಾಮಕರಣ ನೆರವೇರಿಸಿದ್ದೇವೆ” ಎಂದು ಅವರ ಭಾವನೆಗಳನ್ನು ಹಂಚಿಕೊಂಡರು.
ರೇಣುಕಾಸ್ವಾಮಿ ತಾಯಿಯ ಭಾವುಕರ ಪ್ರತಿಕ್ರಿಯೆ
ನಾಮಕರಣ ಶಾಸ್ತ್ರ ಮುಗಿದ ಬಳಿಕ, ರೇಣುಕಾಸ್ವಾಮಿ ತಾಯಿ ರತ್ನಪ್ರಭಾ, ಮಗನ ನೆನೆದು ಭಾವುಕರಾಗಿ ಬಿಕ್ಕಿಬಿಕ್ಕಿ ಅತ್ತರು. “ನನ್ನ ಮಗ ಇದ್ದಿದ್ದರೆ, ಇದನ್ನು ಇನ್ನೂ ದೊಡ್ಡ ಸಂಭ್ರಮದೊಂದಿಗೆ ನಡೆಸುತ್ತಿದ್ದೆವು. ಮೊಮ್ಮಗನ ರೂಪದಲ್ಲಿ ರೇಣುಕಾಸ್ವಾಮಿ ನಮ್ಮ ಮನೆಗೆ ಮರಳಿದ್ದಾನೆ” ಎಂದು ಕಣ್ಣೀರಿಟ್ಟರು.