ವಿಜಯಪುರ: ಪತ್ನಿಯಿಂದಲೇ ಪತಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ವಿಜಯಪುರ ನಗರದ ಆಲಕುಂಟೆ ನಗರದಲ್ಲಿ ಇಂದು ನಸುಕಿನ ಜಾವ 3 ಗಂಟೆಗೆ ನಡೆದಿದೆ. ಮೊಬೈಲ್ನಲ್ಲಿ ಅತಿಯಾಗಿ ಚಾಟ್ ಮಾಡುತ್ತಿದ್ದ ಪತ್ನಿಗೆ ಬುದ್ಧಿವಾದ ಹೇಳಿದ್ದೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.
ತೇಜು ರಾಠೋಡ್ ಎಂಬಾಕೆ ತನ್ನ ಪತಿ ಅಜೀತ್ ರಾಠೋಡ್ ಗಾಢ ನಿದ್ರೆಯಲ್ಲಿದ್ದಾಗ ಕತ್ತಿಗೆ ಚಾಕುವಿನಿಂದ ಇರಿದಿದ್ದಾಳೆ. ಅಜೀತ್ ಕಿರುಚಿಕೊಂಡಾಗ ಮನೆಯವರಿಗೆ ವಿಷಯ ಗೊತ್ತಾಗಿದ್ದು, ಕೂಡಲೇ ಅವರನ್ನು ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಜೀತ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತೇಜು ಸದಾ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದುದ್ದಕ್ಕೆ ಅಜೀತ್ ಬುದ್ಧಿವಾದ ಹೇಳಿದ್ದರು. ಇದು ತೇಜುಗೆ ಸಿಟ್ಟು ತಂದಿದ್ದು, ಆಕೆ ಈ ದುಸ್ಸಾಹಸಕ್ಕೆ ಕೈಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ಆದರ್ಶನಗರ ಪೊಲೀಸರು ತೇಜು ರಾಠೋಡ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಡಿವೈಎಸ್ಪಿ ಬಸವರಾಜ ಯಲಿಗಾರ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಧಾರವಾಡ: ಆಸ್ತಿ ವಿಚಾರಕ್ಕೆ ಜಗಳ, ಕೊಲೆಯಲ್ಲಿ ಅಂತ್ಯ
ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ. ಪರಶುರಾಮ ಗಾಣಗೇರ (50) ಕೊಲೆಯಾದ ವ್ಯಕ್ತಿ.
ನಿನ್ನೆ ತಡರಾತ್ರಿ ಪರಶುರಾಮ ಗಾಣಗೇರ ಮತ್ತು ದ್ಯಾಮಣ್ಣ ಬಡಿಗೇರ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿತ್ತು. ಈ ವೇಳೆ ದ್ಯಾಮಣ್ಣ ಚಾಕುವಿನಿಂದ ಚುಚ್ಚಿ, ತಲೆಗೆ ಕಲ್ಲಿನಿಂದ ಹೊಡೆದು ಪರಶುರಾಮನನ್ನು ಕೊಲೆ ಮಾಡಿದ್ದಾನೆ. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.