ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸೇರಿದಂತೆ ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಏನೂ ಕೊಟ್ಟಿಲ್ಲ. ಎಲ್ಲ ಬಿಜೆಪಿ ಬೆಂಬಲಿಗ ಪಕ್ಷಗಳ ಆಡಳಿತ ಇರುವ ರಾಜ್ಯಗಗಳಿಗೆ (ಆಂಧ್ರಪ್ರದೇಶ, ಬಿಹಾರ) ನೀಡಲಾಗಿದೆ ಎಂಬ ಆರೋಪವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಕರ್ನಾಟಕಕ್ಕೆ ಈ ಬಜೆಟ್ನಲ್ಲಿ 15 ಸಾವಿರ ಕೋಟಿ ರು. ಅನುದಾನ ಘೋಷಿಸಲಾಗಿದ್ದು, 45 ಸಾವಿರ ಕೋಟಿ ರು. ತೆರಿಗೆ ಹಂಚಿಕೆ ಮಾಡಲಾಗಿದೆ ಎಂದು ಅಂಕಿ-ಅಂಶ ಬಿಡುಗಡೆ ಮಾಡಿದೆ. ಈ ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಎನ್ಡಿಎ ಸರ್ಕಾರದಿಂದ ಅಧಿಕ ಪ್ರಯೋಜನಗಳು ರಾಜ್ಯಕ್ಕೆ ಲಭಿಸಿವೆ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ʻಬಜೆಟ್ನಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಕೆಲವು ರಾಜ್ಯಗಳ ಹೆಸರು ಪ್ರಸ್ತಾಪಿಸಲಾಗುತ್ತದೆ. ರಾಜ್ಯಗಳನ್ನು ನಿರ್ಲಕ್ಷಿಸಿದ್ದೇವೆ ಎಂದಲ್ಲ. ಹೆಸರು ಪ್ರಸ್ತಾಪಿಸದೇ ಇದ್ದರೂ ಕೇಂದ್ರೀಯ ಯೋಜನೆಗಳಿಂದ ಎಲ್ಲ ರಾಜ್ಯಗಳಿಗೆ ಪ್ರಯೋಜನ ಲಭಿಸಿರುತ್ತದೆ’ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ರೈಲ್ವೆಗೆ 805% ಅಧಿಕ ನೆರವು!
2009-14ರ ನಡುವಿನ 5 ವರ್ಷ ಅವಧಿಯಲ್ಲಿ ಯುಪಿಎ ಸರ್ಕಾರ ಕರ್ನಾಟಕಕ್ಕೆ ಕೇವಲ 835 ಕೋಟಿ ರು. ರೈಲ್ವೆ ಅನುದಾನ ನೀಡಿತ್ತು. ಆದರೆ 2023-24ರಲ್ಲಿ 7561 ಕೋಟಿ ರು. ಹಾಗೂ 2024-25ರಲ್ಲಿ 7559 ಕೋಟಿ ರು. ನೀಡಲಾಗಿದೆ. ಇದು ಯುಪಿಎನ 5 ವರ್ಷದ ಅವಧಿಗೆ ಹೋಲಿಸಿದರೆ ಶೇ. 805ರಷ್ಟು ಅಧಿಕ ಎಂದು ಎನ್ಡಿಎ ಸರ್ಕಾರ ಹೇಳಿದೆ. ಕರ್ನಾಟಕದ 59 ರೈಲು ನಿಲ್ದಾಣಗಳನ್ನು ಅಮೃತ ರೈಲು ನಿಲ್ದಾಣಗಳೆಂದು ಅಭಿವೃದ್ಧಿಪಡಿಸುವ ಘೋಷಣೆ ಮಾಡಲಾಗಿದೆ. 7 ವಂದೇ ಭಾರತ್ ಸೇರಿ ವಿವಿಧ ಹೊಸ ರೈಲುಗಳನ್ನು ಈ ಹಿಂದೆಯೇ ಘೋಷಿಸಲಾಗಿದೆ ಎಂದು ತಿಳಿಸಿದೆ.