ದೋಸ್ತಿ ನಾಯಕರ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿದೆ. ಈ ಸಮಾವೇಶದ ವೇದಿಕೆಯಲ್ಲಿ ಮಾಜಿ ಸಿಎಂ ಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಸದಾನಂದಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಧ ಮೋಹನ್ ದಾಸ್ ಅಗರವಾಲ್, ನಿಖಿಲ್ ಕುಮಾರಸ್ವಾಮಿ, ಜಿ.ಟಿ ದೇವೇಗೌಡ, ಮುನಿರತ್ನ, ಛಲವಾದಿ ನಾರಾಯಣಸ್ವಾಮಿ, ಶ್ರೀರಾಮುಲು, ಜನಾರ್ದನ ರೆಡ್ಡಿ, ಜೆಡಿಎಸ್ ನಾಯಕ ಸುರೇಶ್ ಬಾಬು, ಸೇರಿ ಎರಡು ಪಕ್ಷದ ಮುಖಂಡರು ಭಾಗವಹಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಮೈಸೂರಿಗೆ ಪಾದಯಾತ್ರೆ ಆಗಮಿಸುವ ವೇಳೆ ಪೊಲೀಸರು ನಮ್ಮನ್ನ ತಡೆದರು, ನಾವು ಸಿಎಂ ಭಾಷಣ ಕೇಳಿದ್ದೀವಿ, ಅವರಿಗೆ ಭಾಷಣದ ವೇಳೆ ಗಂಟಲು ಒಣಗುತ್ತಿತ್ತು ಎಂದಿದ್ದಾರೆ. ವಿಪಕ್ಷಗಳ ಹೋರಾಟದ ವಿರುದ್ಧ ಆಡಳಿತ ಪಕ್ಷ ಹೋರಾಟ ಮಾಡುತ್ತಿದೆ, ಇದು ಇತಿಹಾಸದಲ್ಲೇ ಮೊದಲು, ವಾಲ್ಮೀಕಿ ಹಗರಣವನ್ನ ಸಿಎಂ ಅವರು ಸದನದಲ್ಲಿ ಒಪ್ಪಿಕೊಂಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿಯಲ್ಲಿ ಆಗಿರುವ ಹಗರಣದ ಒಂದೊಂದು ಪೈಸೆಯನ್ನು ವಾಪಾಸ್ ನೀಡಬೇಕು, ನಮ್ಮ ಈ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಲ್ಲ, ಎಸ್ಸಿ, ಎಸ್ಟಿ ಸಮುದಾಯದ ಹಣವನ್ನ ಗ್ಯಾರಂಟಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ, ನಿಮಗೆ ಧಮ್ಮು ತಾಕತ್ತು ಇದ್ರೆ ಆ ಹಣವನ್ನ ವಾಪಾಸ್ ಮಾಡಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗುದ್ದಾರೆ. 14 ವರ್ಷದ ಹಿಂದೆ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ರಿ, ಈಗ 14ವರ್ಷದ ನಂತರ ನಿಮ್ಮ ವಿರುದ್ಧವೇ ಪಾದಯಾತ್ರೆ ನಡೆಯುತ್ತಿದೆ, ಜಗ್ಗಲ್ಲ ಬಗ್ಗಲ್ಲ ಅನ್ನೋ ಬಂಡೆ ಪುಡಿ ಪುಡಿ ಆಗಲೇಬೇಕು, ಸಿಎಂ ಮುಡಾ, ವಾಲ್ಮೀಕಿ ನಿಗಮ ಹಗರಣದ ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಮಾರೋಪ ಸಮಾವೇಶದಲ್ಲಿ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.