ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವ ಆಗಲ್ಲ. ನಾವು ಸಿಎಂ ಪರ ನಿಂತುಕೊಳ್ಳುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಿಂದ ಒತ್ತಡ ಬಂದಿರುವ ಕಾರಣ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿರಬಹುದು ಎಂದು ಹೇಳಿದರು.
ಈಗ ತಾನೇ ಸುದ್ದಿ ಬಂದಿದೆ. ಯಾವ ರೀತಿ ಅನುಮತಿ ಕೊಟ್ಟಿದ್ದಾರೆ ನೋಡಬೇಕು. ಈ ಪ್ರಕರಣ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ವಿ, ಪ್ರಾಸಿಕ್ಯೂಷನ್ಗೆ ಕೊಡಲ್ಲ ಅನ್ನುವ ವಿಶ್ವಾಸ ಇತ್ತು. ಆದರೆ ಅನುಮತಿ ಕೊಟ್ಟಿದ್ದಾರೆ. ನಾವು ಕಾನೂನಾತ್ಮಕವಾಗಿ ಎದುರಿಸ್ತೇವೆ. ರಾಜಭವನ ದುರುಪಯೋಗ ಆಗ್ತಿದೆ. ದೆಹಲಿಯಿಂದ ಒತ್ತಡ ಬಂದು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿರಬಹುದು. ಇದನ್ನು ನಾವು ದ್ವೇಷದ ನಡೆ ಅಂತನೇ ಭಾವಿಸಬೇಕಾಗುತ್ತದೆ ಎಂದು ಪ್ಯಾಸಿಕ್ಯೂಷನ್ ವಿರುದ್ಧ ಅಸಮಾಧಾನ ಹೊರಹಾಕಿದರು.
ನಮ್ಮ ಕಾನೂನು ತಂಡ ಏನು ತೀರ್ಮಾನ ಮಾಡುತ್ತದೆ ನೋಡಬೇಕು. ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದಾರೆ.