ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದಾರೆ. ಇದು ಆತುರಾತುರದಲ್ಲಿ ನೀಡಲಾಗಿದೆ. ಇದೆಲ್ಲ ನೋಡಿದರೆ ರಾಜ್ಯಪಾಲರ ಮೇಲೆ ಬೇರೆ ಬೇರೆ ರೀತಿಯಲ್ಲಿ ಒತ್ತಡಗಳು ಬಂದಿದೆ ಎಂದು ಅನುಮಾನ ವ್ಯಕ್ತವಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿರುವ ನೋಟಿಸ್ ಕುರಿತು ಏನು ಮಾಡಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನೋಟಿಸ್ ಹಿಂಪಡೆಯುವ ಸಂಪುಟದ ತೀರ್ಮಾನವನ್ನು ನಿನ್ನೆ ರಾತ್ರಿಯೇ ರಾಜ್ಯಪಾಲರಿಗೆ ಕಳುಹಿಸಲು ತೀರ್ಮಾನಿಸಲಾಗಿತ್ತು. ರಾಜ್ಯದಲ್ಲಿ ರಾಜ್ಯಪಾಲರು ಇಲ್ಲ, ರಾಜ್ಯಪಾಲರ ಕಚೇರಿಗೆ ಸರ್ಕಾರದ ನೀರ್ಣಯ ತಲುಪಿಸಿರಬೇಕು ಎಂದು ತಿಳಿಸಿದರು.
ಒಂದು ವೇಳೆ ರಾಜ್ಯಪಾಲರು ಏನೇ ನಿರ್ಧಾರ ಕೈಗೊಂಡರು ನಾವು ಎದುರಿಸಲಿದ್ದೇವೆ. ನಾವೆಲ್ಲರು ಕಾನೂನಾತ್ಮಕ ಹೋರಾಟ ಮಾಡಲಿದ್ದೇವೆ. ರಾಜ್ಯಪಾಲರು ಯಾವುದೇ ನಿರ್ಧಾರ ಕೈಗೊಂಡರು ಸಹಿತ ನಮ್ಮ ಸರ್ಕಾರ ನ್ಯಾಯಾಲಯದ ಬಾಗಿಲು ತಟ್ಟಬೇಕಾಗುತ್ತದೆ ಎಂದು ಮುಂದಿನ ನಡೆ ಬಗ್ಗೆ ತಿಳಿಸಿದರು.
ರಾಜ್ಯಪಾಲರಿಗೆ ಶೋಕಾಸ್ ನೋಟಿಸ್ ಕೊಡುವುದು, ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುವ ಅಧಿಕಾರ ಹೊಂದಿದ್ದಾರೆ. ಆದರೆ ಅದನ್ನು ಅವರು ದಾಖಲೆ ಸಮೇತ ಸಮರ್ಥಿಸಿಕೊಳ್ಳಬೇಕಾಗುತ್ತದೆ. ನೋಟಿಸ್ ನೀಡಿದ್ದಕ್ಕೆ ಅವರು ಸ್ಪಷ್ಟನೆ ಕೊಡಬೇಕಾದ ಪ್ರಕ್ರಿಯೆಗಳು ಇರುತ್ತವೆ ಎಂದು ಹೇಳಿದರು.
ಇನ್ನು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಒತ್ತಾಯಿಸಿದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರಿಂದ ದೂರು ಪಡೆದ ದಿನವೇ ರಾಜ್ಯಪಾಲರು ಸಿಎಂಗೆ ನೋಟಿಸ್ ಕೊಟ್ಟಿದ್ದಾರೆ. ಅದೇ ದಿನ ಸಿಎಸ್ ಅವರು ರಾಜ್ಯಪಾಲರ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಕೊಟ್ಟು ಬಂದಿದ್ದಾರೆ. ಇದಾದ ಬಳಿಕ ರಾಜ್ಯಪಾಲರ ಶೊಕಾಸ್ ನೋಟಿಸ್ ಸಿಎಂ ಕೈಸೇರಿದೆ.
ಶೋಕಾಸ್ ನೋಟಿಸ್ ನೀಡಿರುವ ರಾಜ್ಯಪಾಲರ ಸಂಪುಟ ಸಭೆಯ ಮನವಿ ಸಲಹೆ, ಮನವಿ ಪುರಸ್ಕರಿಸಿ, ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವುದಿಲ್ಲ ಎಂಬ ವಿಶ್ವಾಸ ಇದೆ. ಒಂದು ವೇಳೆ ಕಾನೂನು ಪ್ರಕ್ರಿಯೆ ಅನುಮತಿ ಕೊಟ್ಟರೂ ಅದನ್ನು ಕಾನೂನು ಪ್ರಕಾರ ಎದುರಿಸುತ್ತೇವೆ ಎಂದರು.