ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ಆತಂಕ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಸಿಎಂಗೆ ಯಾವುದೇ ಆತಂಕ ಇಲ್ಲ. ಅವರು ಮುಡಾ ವಿಚಾರದಲ್ಲಿ ಸ್ಪಷ್ಟವಾಗಿದ್ದಾರೆ. ಅವರ ತಪ್ಪು ಏನೂ ಇಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಅನ್ನೋದು ಅವರ ತಲೆಯಲ್ಲಿ ಸ್ಪಷ್ಟವಾಗಿದೆ. ಅದನ್ನೇ ಅವರು ಎಲ್ಲರಿಗೂ ಹೇಳ್ತಿದ್ದಾರೆ. ತಾವೇನೂ ಕಾನೂನು ಬಾಹಿರ ತಪ್ಪು ಮಾಡಿಲ್ಲ ಅಂತನೇ ಹೇಳಿದ್ದಾರೆ. ಸಿಎಂ ಆಗಿದ್ದಾಗಲೂ, ವಿಪಕ್ಷ ನಾಯಕ ಆಗಿದ್ದಾಗಲೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಅಂತಾ ಅವರು ಹೇಳ್ತನೇ ಇದ್ದಾರೆ ಎಂದು ಸಿಎಂ ಪರ ಸಮರ್ಥನೆಯ ಮಾತುಗಳನ್ನಾಡಿದರು.
ಸಿಎಂ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾತನಾಡಿದ ಅವರು, ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಹೈಕಮಾಂಡ್ ಹೇಳಿದ ಕೆಲವು ವಿಷಯಗಳ ಬಗ್ಗೆಯೂ ಚರ್ಚೆ ನಡೆಸಿದೆವು. ಇಲ್ಲಿನ ವಿದ್ಯಮಾನ, ಕೋರ್ಟ್ ನಡೆ ನೋಡಿಕೊಂಡು ನಂತರ ರಾಷ್ಟ್ರಪತಿಗಳ ಭೇಟಿ ಬಗ್ಗೆ ಚರ್ಚೆ ಮಾಡುತ್ತೇವೆ. ಅಂತಹ ಸಂದರ್ಭ ಬಂದರೆ ದೆಹಲಿಗೆ ಹೋಗುತ್ತೇವೆ ಎಂದರು.