ನಗರದಲ್ಲಿ ಫ್ಲೆಕ್ಸ್ , ಬ್ಯಾನರ್ ಮುದ್ರಿಸುವ ಪ್ರತಿಯೊಬ್ಬ ಮುದ್ರಣಕರಿಗೆ ವೈಯಕ್ತಿವಾಗಿ ಅನಧಿಕೃತವಾಗಿ ಯಾವುದೇ ಜಾಹೀರಾತು ಪ್ರಕಟಣೆಗಳನ್ನು ಮುದ್ರಣ ಮಾಡದಂತೆ ಎಚ್ಚರಿಕೆ ನೀಡಬೇಕು. ಈ ಬಗ್ಗೆ ಆ.5ರ ಒಳಗೆ ವರದಿ ನೀಡುವಂತೆ ಎಲ್ಲಾ ವಲಯ ಮಟ್ಟದ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಿರ್ದೇಶಿಸಿದ್ದಾರೆ.
ನಗರದಲ್ಲಿ ಅನಧಿಕೃತ ಜಾಹೀರಾತು ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬಿಬಿಎಂಪಿ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಂಟಿ ಪ್ರಮಾಣಿತ ಕಾರ್ಯಾಚರಣೆಯ ವಿಧಾನ ಸಿದ್ಧಪಡಿಸಿ ಆದೇಶಿಸಲಾಗಿದೆ. ಈ ಆದೇಶ ಪತ್ರವನ್ನು ನಗರದಲ್ಲಿರುವ ಪ್ರತಿಯೊಬ್ಬ ಫ್ಲೆಕ್ಸ್ , ಬ್ಯಾನರ್ ಮುದ್ರಣಕರಿಗೆ ನೀಡಿ ಕಟ್ಟುನಿಟ್ಟಾಗಿ ಆದೇಶ ಪಾಲಿಸುವಂತೆ ಸೂಚಿಸಬೇಕು ಎಂದು ಅವರು ತಿಳಿಸಿದ್ದಾರೆ.
ನಗರದಲ್ಲಿ ಎಷ್ಟು ಫ್ಲೆಕ್ಸ್ , ಬ್ಯಾನರ್ ಮುದ್ರಕರಿಗೆ ಆದೇಶ ಪ್ರತಿ ನೀಡಿ ಸೂಚಿಸಲಾಗಿದೆ ಎಂಬ ವರದಿಯನ್ನೂ ಜಾಹೀರಾತು ವಿಭಾಗಕ್ಕೆ ಸಲ್ಲಿಸಬೇಕು. ಈ ಕಾರ್ಯವನ್ನು ಜಂಟಿ ಆಯುಕ್ತರು, ವಲಯ ಮುಖ್ಯ ಆಯುಕ್ತರು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ನಿರ್ವಹಿಸಬೇಕೆಂದು ತಿಳಿಸಲಾಗಿದೆ.ಜನ್ಮ ದಿನದ ಶುಭಾಶಯ ತಿಳಿಸುವ, ಸಂತಾಪಗಳು, ಸ್ವಾಗತ ಫಲಕಗಳು ಮುಂತಾದ ಫಲಕಗಳನ್ನು ಅನಧಿಕೃತವಾಗಿ ಅಳವಡಿಸುವಂತಿಲ್ಲ, ಮುದ್ರಿಸುವಂತಿಲ್ಲ. ಮುದ್ರಣ ಮಾಡಿದರೆ ಉದ್ದಿಮೆ ಪರವಾನಗಿ ರದ್ದು ಪಡಿಸಲಾಗುವುದು. ಜತೆಗೆ, ಒಂದು ವರ್ಷ ಜೈಲು ಹಾಗೂ 2ಲಕ್ಷ ದಂಡ ವಿಧಿಸಲಾಗುವುದು.
ಈ ಅಪರಾಧಗಳಿಗೆ ಕುಮ್ಮಕ್ಕು ನೀಡುವವರಿಗೂ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಫ್ಲೆಕ್ಸ್ ಮುದ್ರಿಸಲು ಬಂದವರು ಪಾಲಿಕೆಯಿಂದ ಅನುಮತಿ ಪಡೆದುಕೊಂಡಿರುವ ಪ್ರತಿಯನ್ನು ಮುದ್ರಕರಿಗೆ ತೋರಿಸಬೇಕು. ಅದು ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳು ನೀಡಿರುವುದು ಎಂಬುದನ್ನು ಮುದ್ರಕರು ಖಚಿತಪಡಿಸಿಕೊಳ್ಳಬೇಕು. ಗ್ರಾಹಕರು ಮುದ್ರಿಸಲು ಬಯಸುವ ಫ್ಲೆಕ್ಸ್ ಗಳು, ಬ್ಯಾನರ್ಗಳು, ಪೋಸ್ಟರ್ಗಳು, ಹೋರ್ಡಿಂಗ್ಗಳ ಕುರಿತಂತೆ ಪಡೆದ ಅನುಮತಿ ಪತ್ರಗಳ ನಕಲನ್ನು ಮಾಡಿಟ್ಟುಕೊಳ್ಳಬೇಕು.