ಬೆಳಗಾವಿಯ ನಾವಗೆ ಗ್ರಾಮದಲ್ಲಿರುವ ಸ್ನೇಹಂ ಕಾರ್ಖಾನೆಯಲ್ಲಿ ಸಂಭವಿಸಿದಂತಹ ಅಗ್ನಿ ಅವಘಡದಿಂದ ಬುಧವಾರದ ಮಧ್ಯಾಹ್ನದವರೆಗೂ ನಿಯಂತ್ರಣಕ್ಕೆ ಬಂದಿರಲಿಲ್ಲ. ಸುಮಾರು 6 ಅಗ್ನಿಶಾಮಕ ವಾಹನಗಳು ಹಾಗೂ 250ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳ ಪ್ರಯತ್ನದಿಂದ ಇದೀಗ ಒಬ್ಬ ಕಾರ್ಮಿಕನ ಶವ ಸಂಪೂರ್ಣ ಸುಟ್ಟು ಕರಕಲಾದ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ( 20) ಅವರ ದೇಹದ ಅಂಗಾಂಗಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದವು. ಮಾನವೀಯತೆ ಮರೆತ ಬೆಳಗಾವಿಯ ಅಧಿಕಾರಿಗಳು ಪ್ಲಾಸ್ಟಿಕ್ ಚೇಲದಲ್ಲಿ ಮೃತದೇಹದ ಭಾಗಗಳನ್ನು ಹಾಕಿ ತಂದೆಯ ಕೈಗೆ ಕೊಟ್ಟು ಕಳುಹಿಸಿದ್ದಾರೆ. ಈ ದೃಶ್ಯವನ್ನು ನೋಡಿದವರ ಕರುಳು ಕಿತ್ತು ಬರುವಂತಾಗಿದೆ.
ದಾರಿಯುದ್ದಕ್ಕೂ ತಂದೆ ತನ್ನ ಕೈಯಲ್ಲಿ ಮಗನ ಸುಟ್ಟ ದೇಹದ ಅಂಗಾಂಗಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿಗೆ ಮರಗುವಂತಾಗಿದೆ. ಜಿಲ್ಲಾಡಳಿತದ ಈ ಅಮಾನವೀಯ ಕಾರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಾನವೀಯತೆಯ ಅಂತಃಕರಣ ಇಲ್ಲದ @INCKarnataka ಸರ್ಕಾರ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಎದೆ ಎತ್ತರಕ್ಕೆ ಬೆಳೆದ ಮಗನ ದೇಹ ಸುಟ್ಟು ಕರಕಲಾದುದ್ದನ್ನು ಸಹಿಸಿಕೊಳ್ಳುವುದೇ ಕಷ್ಟ. ಅಂತದ್ದರಲ್ಲಿ ಮಗನ ಅಳಿದುಳಿದ ದೇಹದ ಅವಶೇಷಗಳನ್ನು ಹೆತ್ತ ತಂದೆಯ ಕೈಗೆ “ಕೈ” ಚೀಲದಲ್ಲಿ ಒಪ್ಪಿಸಿ ಮನೆಗೆ ನಡೆಯಿರಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ..??
ಸಿಎಂ ಸಿದ್ದರಾಮಯ್ಯ ಅವರೆ, ನಾವು ಸಕಲ ಜೀವರಾಶಿಗಳಿಗೂ ಲೇಸನ್ನು ಬಯಸುವ ಕರ್ನಾಟಕದಲ್ಲಿ ಇದ್ದೆವೋ ಅಥವಾ ಮಾನವೀಯತೆ ಸತ್ತಿರುವ ತಾಲಿಬಾನ್ ನಲ್ಲಿದ್ದೆವೋ..??ಶವಕ್ಕೆ ಕನಿಷ್ಠ ಗೌರವವೂ ನೀಡದೆ, ಮಾನವೀಯತೆಯನ್ನು ಕೊಲೆಗೈದಿರುವ ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕಿಡಿ ಕಾರಿದ್ದಾರೆ.