ಬಹುಮಾದರಿ ಸಾರಿಗೆ ಕೇಂದ್ರ, ಬಹುಹಂತದ ನಿಲುಗಡೆ ತಾಣ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಹೆಬ್ಬಾಳದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಬಳಿಯಿರುವ 45.5 ಎಕರೆ ನೀಡುವಂತೆ ಸರ್ಕಾರವನ್ನು ಕೋರಿದೆ. ಕಾಮಗಾರಿ ಪ್ರಗತಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ನೀಲಿ ಮಾರ್ಗ ಸೇರಿದಂತೆ ಪ್ರಸ್ತಾಪಿತ ಕಿತ್ತಳೆ ಹಾಗೂ ಕೆಂಪು ಮಾರ್ಗದ ನಿಲ್ದಾಣಗಳು ಹೆಬ್ಬಾಳದಲ್ಲಿ ನಿರ್ಮಾಣ ಆಗಲಿವೆ. ಅಲ್ಲದೆ, ಕೆಂಪಾಪುರ ಬಳಿ ನೀಲಿ, ಕಿತ್ತಳೆ ಮಾರ್ಗದ ಇಂಟರ್ ಚೇಂಜ್ ಕೂಡ ನಿರ್ಮಾಣ ಆಗಲಿದೆ. ಜೊತೆಗೆ ಉಪನಗರ ರೈಲ್ವೇ ಯೋಜನೆಯ ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಸಂಪರ್ಕಿಸುವ ಮಲ್ಲಿಗೆ ಮಾರ್ಗದ ನಿಲ್ದಾಣವೂ ಬರಲಿದೆ.
ಇವೆಲ್ಲದಕ್ಕೂ ಒಂದಕ್ಕೊಂದು ಸಂಪರ್ಕ ಕಲ್ಪಿಸಲು ಮಲ್ಟಿ ಮಾಡಲ್ ಟ್ರಾನ್ಸ್ಪೋರ್ಟ್ ಹಬ್ ನಿರ್ಮಿಸುವ ಯೋಜನೆ ಇದೆ. ಇದರ ಜೊತೆಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಹಾಗೂ ರೈಲುಗಳ ಕಾರ್ಯಾಚರಣೆಗೆ ಅನುವಾಗುವಂತೆ ಆಧುನಿಕ ಡಿಪೋ ನಿರ್ಮಾಣಕ್ಕೂ ಹೆಬ್ಬಾಳದಲ್ಲಿ ಬಿಂಎಆರ್ಸಿಎಲ್ಗೆ ಭೂಮಿ ಬೇಕಿದೆ. ಹೀಗಾಗಿ ಬಿಎಂಆರ್ಸಿಎಲ್ ಹೆಬ್ಬಾಳದಲ್ಲಿ ಜಾಗ ನೀಡುವಂತೆ ಸರ್ಕಾರವನ್ನು ಕೋರಿದೆ. ಹೆಬ್ಬಾಳದಲ್ಲಿ ದಶಕದ ಹಿಂದೆ ಖಾಸಗೀ ಕಂಪನಿಯ ಯೋಜನೆಗಾಗಿ ಕೆಐಎಡಿಬಿ ಸುಮಾರು 55 ಎಕರೆ ಭೂಸ್ವಾದೀನ ಮಾಡಿಕೊಂಡಿತ್ತು. ಆದರೆ, ಇಲ್ಲಿ ಯಾವುದೇ ಯೋಜನೆ ಆರಂಭವಾಗಿಲ್ಲ. ಹೀಗಾಗಿ ಖಾಲಿ ಇರುವ ಈ ಸ್ಥಳವನ್ನು ಇದೀಗ ಬಿಎಂಆರ್ಸಿಎಲ್ಗೆ ನೀಡುವಂತೆ ಕೋರಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.