ಚಿಕ್ಕಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ 2ನೇ ವರ್ಷದ ಬಂಪರ್ ಕೊಡುಗೆಯಾಗಿ ಅರಿಶಿಣ, ಕುಂಕುಮ ಸೀರೆ, ಬಳೆಗಳ ವಿತರಣೆಗೆ ಭಾನುವಾರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ ಮಹಿಳೆಯರಿಗೆ ವರಮಹಾಲಕ್ಷ್ಮೀ ಹಬ್ಬಕ್ಕೆ ಸೀರೆ, ಅರಿಶಿಣ, ಕುಂಕುಮ, ಬಳೆಗಳನ್ನು ಕಳೆದ ಒಂದು ವರ್ಷದಿಂದ ಕ್ಷೇತ್ರದ ಜನತೆಯ ಸೋದರ ಹಾಗೂ ಮಗನಾಗಿ ನೀಡಿದ್ದೇನೆ. ಈಗಲೂ ನೀಡುತ್ತಿದ್ದೇನೆ. ನಮ್ಮ ಕಡೆಯವರು ಸಹ ಎಲ್ಲಡೆ ವಿತರಿಸುತ್ತಿದ್ದಾರೆ. ನಾವು ಬಡತನದಲ್ಲಿದ್ದಾಗ ನಮ್ಮ ತಾಯಿ ಸಾಕಷ್ಟು ಹಬ್ಬಗಳಿಗೆ ಹೊಸ ಸೀರೆ ಹಾಕಿಕೊಂಡಿರಲಿಲ್ಲ. ಬಡವರ ಆ ನೋವು ಏನೆಂದು ಬಡತನ ಅನುಭವಿಸಿರುವ ನನಗೆ ಗೊತ್ತಿದೆ. ತಾಯಂದಿರು ಯಾರೂ ಹಬ್ಬದ ದಿನ ಹೊಸ ಬಟ್ಟೆ ಇಲ್ಲ ಎಂದು ನೋವು ಪಡಬಾರದೆಂದು ಸೀರೆ ವಿತರಿಸುತ್ತಿದ್ದೇನೆ. ಅನಾಥನಾಗಿರುವ ನಾನು ಕ್ಷೇತ್ರದ ತಾಯಂದಿರಲ್ಲಿ ನನ್ನ ತಾಯಿಯ ಕಾಣುತ್ತಿದ್ದೇನೆ ಎಂದು ತಿಳಿಸಿದರು.