ಅಪರ್ಣಾ ಕನ್ನಡ ನಿರೂಪಣೆಯನ್ನು ಎಷ್ಟು ಸೊಗಸಾಗಿ ಮಾಡಬಹುದು ಎಂದು ತೋರಿಸಿಕೊಟ್ಟ ನಿರೂಪಕಿ. ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅಪರ್ಣಾ ಬಳಿಕ ತಮ್ಮ ನಿರೂಪಣೆಯಿಂದಲೇ ಸಾಕಷ್ಟು ಹೆಸರು ಮಾಡಿದರು. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕೇಳಿಸಿಕೊಳ್ಳುವ ‘ಪ್ರಯಾಣಿಕರಲ್ಲಿ ವಿನಂತಿ’ ಎನ್ನುವ ಸೂಚನೆಗಳು ಅವರ ಕಂಠಸಿರಿಯಿಂದಲೇ ಬಂದಿರುವುದು. ಅಚ್ಚ ಕನ್ನಡ ಮಾತ್ರವಲ್ಲ ಇಂಗ್ಲಿಷ್ ಭಾಷೆ ಮೇಲೂ ಕೂಡ ಹಿಡಿತ ಹೊಂದಿದ್ದರು. ಬದುಕು, ಹೆಸರು ತಂದುಕೊಟ್ಟ ಕನ್ನಡ ಭಾಷೆ ಬಗ್ಗೆ ಅಪರ್ಣಾ ಅಪಾರ ಪ್ರೀತಿ ಹೊಂದಿದ್ದರು. ಕನ್ನಡ ನನಗೆ ಅನ್ನ ಕೊಟ್ಟ ಭಾಷೆ, ಕನ್ನಡವೇ ನನ್ನ ಉಸಿರು ಎನ್ನುತ್ತಿದ್ದ ಅವರಿಗೆ ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಕನಸಿತ್ತು. ಆದರೆ ಆ ಕನಸು ನನಸಾಗಲೇ ಇಲ್ಲ.
ನಿರೂಪಣಾ ಶಾಲೆ ತೆರೆಯುವ ಹಂಬಲ ನಿರೂಪಣೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ಅಪರ್ಣಾ ಅವರಿಗೆ ನಿರೂಪಣಾ ಶಾಲೆಯನ್ನು ತೆರೆಯಬೇಕೆನ್ನುವ ಕನಸಿತ್ತು. ತಮ್ಮ ಆಪ್ತರ ಬಳಿ ಅವರು ಈ ಬಗ್ಗೆ ಹೇಳಿಕೊಂಡಿದ್ದರು ಕೂಡ. ನಿರೂಪಣೆಯ ಶಾಲೆ ತೆರೆದು ಮತ್ತಷ್ಟು ಉತ್ತಮ ನಿರೂಪಕರನ್ನು ಕನ್ನಡಕ್ಕೆ ಕೊಡಬೇಕು ಎನ್ನುವ ಅಪರ್ಣಾ ಅವರ ಆಸೆ ನನಸಾಗುವ ಮುನ್ನವೇ ಕ್ಯಾನ್ಸರ್ ಎನ್ನುವ ಮಹಾಮಾರಿಗೆ ಬಲಿಯಾಗಿದ್ದಾರೆ. ಅಪರ್ಣಾ ಅವರ ಸಾವಿಗೆ ರಾಜಕೀಯ ನಾಯಕರು, ಸಿನಿಮಾ ರಂಗದವರು, ಮಾಧ್ಯಮ ಲೋಕದವರು ಕೂಡ ಕಂಬನ ಮಿಡಿದಿದ್ದಾರೆ. ಮಸಣದ ಹೂವು ಸಿನಿಮಾ ಮೂಲಕ ಮನರಂಜನಾ ರಂಗಕ್ಕೆ ಕಾಲಿಟ್ಟ ಅಪರ್ಣಾ ಮಜಾ ಟಾಕೀಸ್ನಲ್ಲಿ ‘ವರಲಕ್ಷ್ಮಿ’ ಎನ್ನುವ ತಮಾಷೆಯ ಪಾತ್ರದಲ್ಲಿ ಕೂಡ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು. ಅಪರ್ಣಾ ಅವರ ಸಾವು ನಿಜಕ್ಕೂ ಕನ್ನಡ ಸಿನಿಮಾ, ಮಾಧ್ಯಮ ಮತ್ತು ನಿರೂಪಣಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ ಹೋದರೂ, ಧ್ವನಿಯಾಗಿ ಮಾತ್ರ ಕನ್ನಡಿಗರ ಜೊತೆ ಸದಾ ಇರುತ್ತಾರೆ.