ಗಾಜನೂರು ಬರೀ ಊರಲ್ಲ. ಈ ಊರಿನ ಬಗ್ಗೆ ಪೀಠಿಕೆ ಹಾಕುವ ಅಗತ್ಯವೂ ಇಲ್ಲ ಯಾಕಂದ್ರೆ, ಏಳು ಕೋಟಿ ಕನ್ನಡಿಗರ ಹೆಮ್ಮೆ, ಕನ್ನಡ ಕಂಠೀರವ, ನಟಸಾರ್ವಭೌಮ, ವರನಟ ಡಾ ರಾಜ್ಕುಮಾರ್ ಅವರ ಜನ್ಮಭೂಮಿ ಗಾಜನೂರು ಅನ್ನೋದು ಎಲ್ರಿಗೂ ಗೊತ್ತೆಯಿದೆ. ಹೀಗ್ಯಾಕೆ ಗಾಜನೂರಿನ ಪ್ರಸ್ತಾಪ ಅಂದರೆ ಅಪ್ಪನಂತೆ ಗಾಜನೂರಿಂದ ಬಂದು ಗಂಧದಗುಡಿಗೆ ಕೊಹಿನೂರ್ ಡೈಮಂಡ್ ಎನಿಸಿಕೊಂಡ ಅಣ್ಣಾವ್ರ ಹಿರಿಮಗ ಹ್ಯಾಟ್ರಿಕ್ ಹೀರೋ ಶಿವಣ್ಣನ ಬಗ್ಗೆ ಹೇಳಲಿಕ್ಕೆ
ಶಿವಣ್ಣ ಬರ್ತ್ ಡೇ ಸಂಭ್ರಮದಲ್ಲಿದಾರೆ. ಜುಲೈ 12 ಶಿವರಾಜ್ಕುಮಾರ್ ಅವರ ಹುಟ್ಟುಹಬ್ಬ. 61 ಕಂಪ್ಲೀಟ್ ಮಾಡಿ 62ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಈ ಹೊತ್ತಲ್ಲಿ ಬಂಗಾರ ಸನ್ ಆಫ್ ಬಂಗಾರದ ಮನುಷ್ಯನ ಹುಟ್ದಬ್ಬವನ್ನ ವಿಶೇಷವಾಗಿಸ್ಬೇಕು, ಸೆಂಚುರಿಸ್ಟಾರ್ ಸಿನಿಜರ್ನಿನಾ ಮೆಲುಕು ಹಾಕ್ಬೇಕು ಅಂತಲೇ ಗಂಧದಗುಡಿಯ ಪಾಲಿಗೆ ಕೊಹಿನೂರ್ ಡೈಮಂಡ್ ಆದ ಗಾಜನೂರು ಗಂಡಿನ ಕಥೆನಾ ಹರವಿಡ್ತಿದ್ದೇವೆ.
ಶಿವಣ್ಣ ಹುಟ್ಟಿದ್ದು ಮದ್ರಾಸ್ ನಲ್ಲಿ. 1962 ಜುಲೈ 12 ಶಿವಣ್ಣನ ಜನ್ಮದಿನ. ಆ ದಿನ ಗಾಜನೂರಿನ ಮನೆಯಲ್ಲಿ ಸಂಭ್ರಮ ಸಡಗರ ಮುಗಿಲು ಮುಟ್ಟಿತ್ತು.ಇಡೀ ಊರಿಗೆ ಊರೇ ಸಂಭ್ರಮಿಸಿತ್ತು. ಮೊದಲ ಮಗು ಗಂಡು ಮಗು ಆಗಿದ್ದರಿಂದ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಮುತ್ತತ್ತಿರಾಯನಿಗೆ ಕೈ ಎತ್ತಿ ಮುಗಿದಿದ್ದರು. ತಮ್ಮ ತಂದೆ ಪುಟ್ಟ ಸ್ವಾಮಿಯವರ ನೆನಪಿಗೋಸ್ಕರ ನಾಗರಾಜು ಶಿವಪುಟ್ಟಸ್ವಾಮಿ ಅಂತಾನೇ ನಾಮಕರಣ ಮಾಡಿಸಿದ್ದರು. ವಿಶೇಷ ಅಂದರೆ ಗಾಜನೂರಿನ ಮಂದಿ ಇವತ್ತಿಗೂ ಶಿವಣ್ಣನನ್ನ ಶಿವಪುಟ್ಟಸ್ವಾಮಿ ಅಂತಲೇ ಕರೀತಾರೆ. ಇನ್ನೂ, ದೊಡ್ಮನೆಯ ಹಿರಿಮಗನಾಗಿ ಹುಟ್ಟಿದ ಶಿವಣ್ಣ, ಇವತ್ತು ಇಡೀ ಕನ್ನಡ ಚಿತ್ರರಂಗಕ್ಕೆ ಹಿರಿಯಣ್ಣನಂತಿದ್ದಾರೆ. ಅಣ್ಣಾವ್ರು, ರೆಬೆಲ್ ಸ್ಟಾರ್ ಅಂಬರೀಶ್ ಅವ್ರು ಹೋದ್ಮೇಲೆ ಶಿವಣ್ಣನೇ ಲೀಡರ್ ಆಗ್ಬೇಕು ಅಂತ ಅಭಿಮಾನಿಗಳಾದಿಯಾಗಿ ಚಿತ್ರರಂಗದವೂ ಒತ್ತಾಯಿಸ್ತಿದ್ದಾರೆ. ಅಷ್ಟರ ಮಟ್ಟಿಗೆ ದೊಡ್ಮನೆಯ ಬೆಲೆ ಗೌರವ ಕಾಪಾಡಿಕೊಂಡು ಹೋಗ್ತಿರುವ ಗಾಜನೂರು ಗಂಡು, ಗಂಧದಗುಡಿಯ ಪಾಲಿಗೆ ಕೊಹಿನೂರ್ ಡೈಮಂಡ್ ಕೂಡ ಆಗಿದ್ದಾರೆ.
ಯಸ್, ತಂದೆಯ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಬಾಲನಟನಾಗಿ ಬಣ್ಣ ಹಚ್ಚಿ ಬೆಳ್ಳಿತೆರೆ ಪ್ರವೇಶಿಸಿದ ಶಿವಣ್ಣ, 1986ರಲ್ಲಿ ಆನಂದ್ ಚಿತ್ರದ ಮೂಲಕ ಹೀರೋ ಆಗಿ ಇಂಟ್ರುಡ್ಯೂಸ್ ಆದರು. ಆನಂದ್ ನಂತರ ರಥಸಪ್ತಮಿ, ಮನಮೆಚ್ಚಿದ ಹುಡುಗಿ ಚಿತ್ರಕ್ಕೆ ಬಣ್ಣ ಹಚ್ಚಿ ಮೊದಲ ಮೂರು ಸಿನ್ಮಾಗಳಲ್ಲೇ ಹ್ಯಾಟ್ರಿಕ್ ಬಾರಿಸಿದರು. ಜನುಮದ ಜೋಡಿ, ಜೋಗಿ, ತವರಿಗೆ ಬಾ ತಂಗಿಯಂತಹ ಸಿನ್ಮಾಗಳ ಮೂಲಕ ಕರುನಾಡ ಮಂದಿಯ ಹೃದಯಕ್ಕೆ ಇನ್ನಷ್ಟು ಹತ್ತಿರವಾದರು. ಓಂ ಚಿತ್ರದ ಮೂಲಕ ಕನ್ನಡಿಗರನ್ನ ಮಾತ್ರವಲ್ಲ ಪರಭಾಷಿಗರನ್ನೂ ಮೆಚ್ಚಿಸುವಲ್ಲಿ ಯಶಸ್ವಿಯಾದರು.ಓಂ ನಿಮಗೆಲ್ಲ ಗೊತ್ತಿರುವ ಹಾಗೇ ಶಿವಣ್ಣನ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ಸಿನ್ಮಾ. ಇವತ್ತಿಗೂ ಈ ಸಿನಿಮಾ ರಿರಿಲೀಸ್ ಆದರೆ ಥಿಯೇಟರ್ ಹೌಸ್ಫುಲ್ ಆಗುತ್ತೆ. ಕೋಟ್ಯಾಂತರ ರೂಪಾಯಿ ಕಲೆಕ್ಷನ್ ಆಗುತ್ತೆ. ಈ ಚಿತ್ರ ನಿರ್ಮಾಣಗೊಂಡು ಹೆಚ್ಚುಕಮ್ಮಿ 30 ವರ್ಷಗಳು ಕಳೆದಿವೆ. ಆದರೆ, ಇವತ್ತಿಗೂ ಓಂ ಕ್ರೇಜ್ನ ಬೀಟ್ ಮಾಡೋಕೆ ಸ್ಟಾರ್ ನಟರುಗಳು ಸಿನಿಮಾಗಳು ತಿಣುಕಾಡುತ್ತವೆ. ಅಷ್ಟರ ಮಟ್ಟಿಗೆ ಹವಾ ಸೃಷ್ಟಿಸಿರೋ ಓಂ ಮುತ್ತಣ್ಣನ ಸಿನಿಕರಿಯರ್ ನ 25 ನೇ ಚಿತ್ರವಾಗಿದೆ. 50 ನೇ ಚಿತ್ರ ಎಕೆ 47. ಶ್ರೀರಾಮ 75 ನೇ ಸಿನ್ಮಾ. ಜೋಗಯ್ಯ 100 ನೇ ಚಿತ್ರ. ಈ ನಾಲ್ಕು ಚಿತ್ರಗಳು ಗಾಜನೂರು ಗಂಡಿನ ಸಿನಿಮಾ ಜರ್ನಿಯಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿವೆ.
ಇನ್ನೂ ಶಿವಣ್ಣ ತನ್ನ ಸಿನಿಕರಿಯರ್ ನಲ್ಲಿ ಹಲವು ಮೈಲಿಗಲ್ಲುಗಳನ್ನ ನೋಡಿದ್ದಾರೆ. ಇವತ್ತಿಗೂ ಮೈಲ್ಸ್ಟೋನ್ ಸಾಧಿಸುವತ್ತಲೇ ಹೆಜ್ಜೆಹಾಕುತ್ತಾ ಬೆವರು ಬಸಿಯುತ್ತಿದ್ದಾರೆ. ಕಳೆದ 38 ವರ್ಷದಿಂದ ಬೆಳ್ಳಿತೆರೆ ಮೇಲೆ ವಿರಾಜಮಾನವಾಗಿ ಹೊಳೆಯುತ್ತಿರುವ ಗಾಜನೂರು ಗಂಡು, ಚಿತ್ರರಂಗದಲ್ಲಿ 37 ವರ್ಷ ಪೂರೈಸಿ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಮೂವತ್ತೆಂಟು ವರ್ಷದ ಸಿನಿಜರ್ನಿಯಲ್ಲಿ ಭರ್ತಿ 130 ಚಿತ್ರಗಳಿಗೆ ಜೀವತುಂಬಿದ್ದಾರೆ. ಸದ್ಯ ಐದಕ್ಕೂ ಹೆಚ್ಚು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಭೈರತಿ ರಣಗಲ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ವೇದ ಸಿನಿಮಾದ ನಂತರ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ಗೀತಾ ಶಿವರಾಜ್ಕುಮಾರ್ ಭೈರತಿ ರಣಗಲ್ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಮಫ್ತಿ ಚಿತ್ರದ ಪ್ರೀಕ್ವೆಲ್ ಕಥೆನಾ ನಿರ್ದೇಶಕ ನರ್ತನ್ ಭೈರತಿ ರಣಗಲ್ ಚಿತ್ರದಲ್ಲಿ ಕಟ್ಟಿಕೊಡ್ತಿದ್ದು ಈಗಾಗಲೇ ಫಸ್ಟ್ ಲುಕ್ನಲ್ಲೇ ಪ್ರೇಕ್ಷಕರನ್ನ ಕಟ್ಟಿಹಾಕಿದ್ದಾರೆ. ಭಜರಂಗಿ ಬರ್ತ್ಡೇಗೆ ಸ್ಪೆಷಲ್ಲಾಗಿ ಟೀಸರ್ ರಿಲೀಸ್ ಮಾಡ್ತಿದ್ದಾರೆ. ಇದರ ಜೊತೆಗೆ ಕೆ ಆರ್ ಜಿ ಸಂಸ್ಥೆಯ ಉತ್ತರಕಾಂಡ ಚಿತ್ರತಂಡ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಮಾಸ್ ಲೀಡರ್ ಹುಟ್ದಬ್ಬಕ್ಕೆ ಮಾಸ್ ಲುಕ್ ಪೋಸ್ಟರ್ನ ಉಡುಗೊರೆಯಾಗಿ ನೀಡಿ ಫ್ಯಾನ್ಸ್ ಥ್ರಿಲ್ಲಾಗುವಂತೆ ಮಾಡಿದೆ. ಇನ್ನೂ ʻಭೈರವನ ಕೊನೆ ಪಾಠʼ ಟೀಮ್ ಕಡೆಯಿಂದ ಎರಡು ಪೋಸ್ಟರ್ಸ್ ಬಿಡುಗಡೆ ಮಾಡಲಾಗಿದೆ. ವೀರಯೋಧನ ಅವತಾರವೆತ್ತಿರೋ ಭೈರವನ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿದೆ. ಇದಷ್ಟೇ ಅಲ್ಲ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ತಮ್ಮ ʻ45ʼ ಸಿನಿಮಾ ಕಡೆಯಿಂದ ಸ್ಪೆಷಲ್ ಸಾಂಗ್ ರಿಲೀಸ್ ಮಾಡ್ತಿದ್ದಾರೆ. ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದದ ಫೈರ್ ಫ್ಲೈ ಸಿನಿಮಾ ಕಡೆಯಿಂದ ಸ್ಪೆಷಲ್ ಗಿಫ್ಟ್ ಸಿಗಲಿದೆ.
ಆಗಲೇ ಹೇಳಿದಂತೆ ಶಿವಣ್ಣ ಐದಾರು ಸಿನಿಮಾಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಪ್ರತಿ ಸಿನ್ಮಾ ಮೊದಲ ಸಿನ್ಮಾದಂತೆ ಫೀಲ್ ಮಾಡ್ತಾ, ಅದಕ್ಕಾಗಿ ತಯ್ಯಾರಿ ನಡೆಸುತ್ತಾ, ಸದಾ ಹುಮ್ಮಸ್ಸಿನಿಂದ, ಹೊಸ ಚೈತನ್ಯದಿಂದ, ನವ ಉತ್ಸಾಹದಿಂದಿರುವ ಶಿವಣ್ಣ ಅಪ್ ಕಮ್ಮಿಂಗ್ ಹೀರೋಗಳಿಗೆ ಮಾತ್ರವಲ್ಲ ಸೂಪರ್ ಸ್ಟಾರ್ ಗಳಿಗೆ ಸೆಡ್ಡು ಹೊಡೆದು ನಿಲ್ತಿದ್ದಾರೆ. ಅಂದ್ಹಾಗೇ, ಶಿವಣ್ಣ ತಮ್ಮ ಸಿನಿಮಾ ಕರಿಯರ್ ನಲ್ಲಿ ಸಾಕಷ್ಟು ಸಕ್ಸಸ್ ನ ನೋಡಿದ್ದಾರೆ. ಆ ಸಕ್ಸಸ್ ಗ್ರಾಫ್ ಇಳಿಮುಖ ಆಗದೇ ಇರೋದಕ್ಕೆ ಕಾರಣ 62 ರಲ್ಲೂ ಶಿವಣ್ಣನಿಗೆ ಸಿನ್ಮಾ ಮೇಲಿರುವಂತಹ ಅಪಾರವಾದ ಪ್ರೀತಿ ಮತ್ತು ಶ್ರದ್ದಾಭಕ್ತಿ. ಪ್ರತಿ ಸಿನ್ಮಾವನ್ನ ಕಣ್ಣಿಗೊತ್ತಿಕೊಳ್ಳುವ ಶಿವಣ್ಣ, ನಿಷ್ಠೆಯಿಂದ ಸಿನ್ಮಾ ಮಾಡ್ತಾರೆ. ಪ್ರತಿ ಸಿನ್ಮಾಗೂ ಹಾರ್ಡ್ ವರ್ಕ್ ಮತ್ತು ಡೆಡಿಕೇಷನ್ ಇದ್ದೇ ಇರುತ್ತೆ. ಹೀಗಾಗಿಯೇ, 62ರಲ್ಲೂ ಹೆಚ್ಚುಕಮ್ಮಿ ಹತ್ತು ಸಿನಿಮಾಗಳನ್ನ ಕೈಲಿಡಿದುಕೊಂಡಿದ್ದಾರೆ. 62ರಲ್ಲೂ ಶಿವಣ್ಣ ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದಾರೆ, ಆನಂದ್ ಸಿನ್ಮಾದಲ್ಲಿ ಹೇಗಿದ್ರೋ ಈಗಲೂ ಅದೇ ಛಾರ್ಮ್ನ ಉಳಿಸಿಕೊಂಡಿದ್ದಾರೆ.
ಎನಿವೇ, ಗಾಜನೂರಿನಿಂದ ಬಂದು ಗಂಧದಗುಡಿಗೆ ಲೀಡರ್ ಆದರು. ಬೆಳ್ಳಿಪರದೆಗೆ ಅನಭಿಷಕ್ತ ದೊರೆಯಾದರು. ಇಡೀ ಕರುನಾಡಿಗೆ ಚಕ್ರವರ್ತಿನೂ ಆದರು. ಇಷ್ಟೆಲ್ಲಾ ಆಗಿದ್ದು ಶಿವಣ್ಣ ಅಣ್ಣಾವ್ರ ಮಗ ಅನ್ನೋ ಕಾರಣಕ್ಕಲ್ಲ ರಾಜ್ ಕುಮಾರ್ ಮಗ ಅನ್ನೋ ಲೇಬಲ್ನ ಕಳಚಿಟ್ಟು ಬಣ್ಣದ ಲೋಕದಲ್ಲಿ ಬೆವರು ಸುರಿಸಿದ್ದಕ್ಕೆ. ಅಹಂಕಾರ ಬದಿಗಿಟ್ಟು ಎಲ್ಲರ ಜೊತೆ ಬೆರತಿದ್ದಕ್ಕೆ, ಸರಳವಾಗಿ ಬದುಕಿದ್ದಕ್ಕೆ. ಯಸ್, ಇವತ್ತಿಗೂ ಸಿಂಪ್ಲಿಸಿಟಿಗೆ ಇನ್ನೊಂದು ಹೆಸರೆಂಬಂತೆ ಸರಳವಾಗಿ ಬದುಕ್ತಿದ್ದಾರೆ. ಇಡೀ ಜಗತ್ತನ್ನ ಮೆಚ್ಚಿಸೋಕೆ ಆಗುತ್ತೇನ್ರಿ, ಯಾವುದೇ ಕಾರಣಕ್ಕೂ ಸಾಧ್ಯಯಿಲ್ಲ ಅನ್ನೋರ ಮುಂದೆನೇ ಜಗಮೆಚ್ಚಿದ ಮಗನಾಗಿದ್ದಾರೆ. ಇವತ್ತು ಜಗತ್ತು ಕೊಂಡಾಡುವ ಸಿನಿಮಾಗಳತ್ತ ದಾಪುಗಾವಲಿಟ್ಟಿದ್ದಾರೆ. ಜೈಲರ್ ಮೂಲಕ ಚಿತ್ರಜಗತ್ತನ್ನ ನಿಬ್ಬೆರಗಾಗಿಸಿರುವ ಗಾಜನೂರು ಗಂಡು ಈಗ ಸ್ಯಾಂಡಲ್ವುಡ್ ಮಾತ್ರವಲ್ಲ ಪ್ಯಾನ್ ಇಂಡಿಯಾ ಸಿನಿಮಾಮಂದಿ ಕಾಲ್ಶೀಟ್ಗಾಗಿ ಕ್ಯೂ ನಿಲ್ಲುವಂತೆ ಮಾಡಿದ್ದಾರೆ. ಜೈಲರ್, ಕ್ಯಾಪ್ಟನ್ ಮಿಲ್ಲರ್ ನಂತರ ರಾಮ್ಚರಣ್ ತೇಜಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಬಾಲಿವುಡ್ನಿಂದಲೂ ಬುಲಾವ್ ಬರ್ತಿದ್ದು ಫೈನಲ್ ಹಂತದಲ್ಲಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಎನಿವೇ ಆಲ್ ದಿ ಬೆಸ್ಟ್ ಶಿವಣ್ಣ.. ನಿಮ್ಮ ಸಿನಿಮಾಜರ್ನಿ ಹೀಗೆ ಸಾಗಲಿ, ಬೆಳ್ಳಿತೆರೆಮೇಲೆ ಸುನಾಮಿ ಏಳಲಿ