ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ರದ್ದತಿ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ಬರಲಿದೆ. ನ್ಯಾ. ನಾಗಪ್ರಸನ್ನ ಅವರ ಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ಎಲ್ಲರ ಚಿತ್ತ ಹೈಕೋರ್ಟ್ನತ್ತ ನೆಟ್ಟಿದೆ. ಸಿಎಂ ಸಿದ್ದರಾಮಯ್ಯ ಪರ ಹಿರಿಯ ನ್ಯಾಯವಾದಿ ಅಭಿಷೇಕ್ ಮನುಸಿಂಘ್ವಿ, ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮುಂದುವರೆಸಲಿದ್ದಾರೆ. ಆಗಸ್ಟ್ 19ರ ವಿಚಾರಣೆ ವೇಳೆ, ಆಗಸ್ಟ್ 29 ರವರೆಗೂ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮಕ್ಕೆ ಸೂಚಿಸದಂತೆ ಕೆಳಹಂತದ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿತ್ತು.
ಈ ಮೂಲಕ ತಾತ್ಕಾಲಿಕ ರಿಲೀಫ್ ಕೊಟ್ಟಿತ್ತು. ಇಂದು ಕೋರ್ಟ್ನ ಮುಂದಿನ ನಡೆ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಕೋರ್ಟ್ ತೀರ್ಪಿನ ಮೇಲೆ ಮುಂದಿನ ರಾಜಕೀಯ ಹಾಗೂ ಕಾನೂನು ಆಗುಹೋಗುಗಳು ನಿರ್ಧಾರ ಆಗಲಿವೆ. ಕೋರ್ಟ್ ತೀರ್ಪು ಏನೇ ಬಂದರೂ ಸಿಎಂ ಪರವಾಗಿ ಹೈಕಮಾಂಡ್ ನಿಲ್ಲಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದರು.
ಈ ಮಧ್ಯೆ, ಡಿಕೆ ಶಿವಕುಮಾರ್ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪ್ರಶ್ನಿಸಿ ಸಿಬಿಐ, ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿಸಿರುವ ಹೈಕೋರ್ಟ್, ನಾಳೆಯೇ ಆದೇಶ ನೀಡಲಿದೆ. ಯತ್ನಾಳ್ ಸಲ್ಲಿಸಿದ್ದ ಅರ್ಜಿಯೂ ನಾಳೆಯೇ ಇತ್ಯರ್ಥವಾಗುವ ನಿರೀಕ್ಷೆ ಇದೆ. ಇದು ತೀವ್ರ ಕುತೂಹಲ ಕೆರಳಿಸಿದೆ. ಇಂದು ಡಿಸಿಎಂ ನಿವಾಸಕ್ಕೆ ಹಲವು ಶಾಸಕರು ಭೇಟಿ ನೀಡಿ ಚರ್ಚೆ ನಡೆಸಿದ್ದರು.