ಸೆಪ್ಟೆಂಬರ್ 17ರಂದು ದರ್ಶನ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳುವುದರಲ್ಲಿ ಇತ್ತು. ಹೀಗಾಗಿ, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಎದುರು ಅವರನ್ನು ಹಾಜರುಪಡಿಸಲಾಯಿತು. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಿ ಜಡ್ಜ್ ಆದೇಶ ಹೊರಡಿಸಿದ್ದಾರೆ. ಈಗ ದರ್ಶನ್ ಅವರು 100 ದಿನ ಪೂರೈಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ಇಂದಿಗೆ ಬರೋಬ್ಬರಿ 100 ದಿನ ತುಂಬಿದೆ. ಹಾಯಾಗಿ ಸಿನಿಮಾ ಶೂಟಿಂಗ್ ಮಾಡಿಕೊಂಡಿರಬೇಕಿದ್ದ ಅವರು ಈಗ ಜೈಲಿನಲ್ಲಿ ಕುಳಿತು ಟಿವಿ, ಕುರ್ಚಿ, ಮನೆಯೂಟ ಸೇರಿ ಅನೇಕ ಸವಲತ್ತಿಗೆ ಬೇಡಿಕೆ ಇಡುತ್ತಾ ಪರಿತಪಿಸಬೇಕಾಗುತ್ತಿದೆ. ದರ್ಶನ್ ಅವರ ಪರವಾಗಿ ಇನ್ನೂ ಜಾಮೀನು ಅರ್ಜಿ ಸಲ್ಲಿಕೆ ಆಗಿಲ್ಲ. ಹೀಗಾಗಿ ಅವರು ಮತ್ತಷ್ಟು ದಿನ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ.
ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆಯಿತು. ಜೂನ್ 11ರಂದು ಮೈಸೂರಿನ ಹೋಟೆಲ್ನಲ್ಲಿ ದರ್ಶನ್ ಬಂಧನ ಆಯಿತು. ಕೊಲೆ ನಡೆದ 60 ಗಂಟೆಯೊಳಗೆ ನಟನ ಬಂಧನ ಆಗಿತ್ತು. ಅದೇ ದಿನ ದರ್ಶನ್ ಅವರನ್ನು ಬೆಂಗಳೂರಿಗೆ ಪೊಲೀಸರು ಕರೆತಂದಿದ್ದರು. ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಯಿತು. ಆ ಬಳಿಕ ಕೇಸ್ನಲ್ಲಿ ಭಾಗಿಯಾದ ಇತರ 16 ಆರೋಪಿಗಳನ್ನು ಬಂಧಿಸಲಾಯಿತು. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. 12 ದಿನ ಕೊಲೆ ಕೇಸ್ ಸಂಬಂಧ ಪೊಲೀಸರು ದರ್ಶನ್ ವಿಚಾರಣೆ ನಡೆಸಿದ್ದರು. ಈ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದಾರೆ.
ನಂತರ ಕೋರ್ಟ್ ದರ್ಶನ್ಗೆ ನ್ಯಾಯಾಂಗ ಬಂಧನ ವಿಧಿಸಿತು. ಹೀಗಾಗಿ, ದರ್ಶನ್ ಅವರು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆದರು. ಅಲ್ಲಿ ಸುಮಾರು ಎರಡು ತಿಂಗಳು ಇದ್ದರು. ಆಗ ಅವರ ಐಷಾರಾಮಿ ಜೀವನದ ಫೋಟೋ ಹೊರಬಿತ್ತು. ರೌಡಿಶೀಟರ್ ನಾಗನ ಜೊತೆ ಸೇರಿ ಸಿಗರೇಟ್ ಸೇದುತ್ತಾ, ಕಾಫಿ ಹೀರುತ್ತಿದ್ದ ಫೋಟೋ ವೈರಲ್ ಆದ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು.
ಸದ್ಯ ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಸದ್ಯ ಅವರ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಆಗಿದೆ. ಜೈಲಿನಲ್ಲಿ ಸಖತ್ ಹಿಂಸೆ ಆಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಆದಾಗ್ಯೂ ಅವರ ಧಿಮಾಕು ಕಡಿಮೆ ಆಗಿಲ್ಲ. ಇತ್ತೀಚೆಗೆ ಮಾಧ್ಯಮಗಳ ಕ್ಯಾಮೆರಾ ಕಂಡಾಗ ಅಸಹ್ಯ ಸನ್ನೆ ಮಾಡಿದ್ದರು.