ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ ಸೋಮವಾರ ಬೆಳಗಾವಿ ಜಿಲ್ಲೆಯಲ್ಲಿ ಇಳಿಮುಖವಾಗಿದ್ದರಿಂದ ಗೋಕಾಕ, ಮೂಡಲಗಿಯಲ್ಲಿ ಉಂಟಾಗಿದ್ದ ಪ್ರವಾಹ ಇಳಿಮುಖವಾಗಿದೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾದ ಅಬ್ಬರ ಮಾತ್ರ ಯಥಾಸ್ಥಿತಿಯಲ್ಲಿಯೇ ಇದೆ. ಧಾರವಾಡ, ಬೆಳಗಾವಿ ಸೇರಿ ಇತರೆ ಊರುಗಳಿಗೆ ಸಂಪರ್ಕ ಬಾಗಲಕೋಟೆಯ ಕಲಿಸುವ ಮುಧೋಳ-ಚಿಂಚಖಂಡಿ ಸೇತುವೆ ಘಟಪ್ರಭಾ ನದಿ ಪ್ರವಾಹ ಹಿನ್ನೆಲೆಯಲ್ಲಿ ಮುಳುಗಡೆಯಾಗಿದೆ. ಇದರಿಂದ ಸೋಮವಾರ ಈ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಸೋಮವಾರ ಸಂಜೆವರೆಗೂ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ನದಿ ಪಾತ್ರದಲ್ಲಿ ವಾಸವಿರುವ ಜನ ಪ್ರವಾಹದ ಭೀತಿಯಲ್ಲಿದ್ದಾರೆ. ಕಳೆದೆರಡು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಬೆಳಗಾವಿ, ಗೋಕಾಕ ನಗರಕ್ಕೆ ಎದುರಾಗಿದ್ದ ಪ್ರವಾಹದ ಆತಂಕ ಕಡಿಮೆಯಾಗಿದೆ. ಹೀಗಾಗಿ ಮುಳುಗಡೆಯಾಗಿದ್ದ ನಗರದ ಚಿಕ್ಕೋಳಿ ಸೇತುವೆ ಸೋಮವಾರ ಬೆಳಗ್ಗೆ ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಗೋಕಾಕ ಜನತೆ ನಿಟ್ಟುಸಿರು ಬಿಡುವಂತಾಗಿದೆ.