ಕರ್ನಾಟಕದಲ್ಲಿ ಈ ವರ್ಷ ನೀರಿಕ್ಷೆಗೂ ಮೀರಿ ಊಹೆಗೂ ಸಿಗದಂತೆ ಡೆಂಗ್ಯೂ ಜ್ವರ ಜನರ ಜೀವ ಹಿಂಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಡೆಂಘೀ ಕೇಸ್ ವರದಿಯಾಗಿವೆ. ರಾಜ್ಯದಲ್ಲಿ 24 ಗಂಟೆ ಅವಧಿಯಲ್ಲಿ 486 ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಒಟ್ಟು ಸಕ್ರಿಯ ಪ್ರಕರಣಗಳು ಸಂಖ್ಯೆ 486ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರ ಕೂಡಾ 296 ಡೆಂಗ್ಯೂ ಪಾಸಿಟಿವ್ ಕಂಡು ಬಂದಿರುವುದು ಆತಂಕ ಹೆಚ್ಚಿಸಿದೆ. ಡೆಂಗ್ಯೂ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳು ಮಾಸ್ಟರ್ ಪ್ಲಾನ್ ಮಾಡಿಕೊಂಡಿವೆ. ಡೆಂಗ್ಯೂ ನಿಯಂತ್ರಣಕ್ಕೆ ಸೊಳ್ಳೆ ಪರದೆಯ ಮೊರೆ ಹೋಗಿವೆ. ಡೆಂಗ್ಯೂ ರೋಗಿಗಳಲ್ಲಿ ಸೋಂಕಿನ ತೀವ್ರತೆ ತಡೆಯಲು ಸೊಳ್ಳೆ ಪರದೆಯನ್ನು ಬಳಕೆ ಮಾಡುತ್ತಿವೆ.
ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರಿಗೆ ಗುಣಮುಖರಾಗುವ ಹೊತ್ತಿನಲ್ಲಿ ಮತ್ತೆ ಡೆಂಗ್ಯೂ ಸೊಳ್ಳೆ ಕಚ್ಚಿದರೆ ಸೋಂಕು ಹೆಚ್ಚು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಜಯನಗರ ಸಾರ್ವಜನಿಕ ಆಸ್ಪತ್ರೆಯು ಡೆಂಗ್ಯೂ ವಾರ್ಡ್ಗಳಿಗೆ ಹಾಗೂ ಜ್ವರದ ಪ್ರಕರಣಗಳಿಂದ ದಾಖಲಾದ ರೋಗಿಗಳ ಬೆಡ್ಗೆ ಸೊಳ್ಳೆ ಪರದೆ ಹಾಕಿದೆ. ಜೊತೆಗೆ ಆಸ್ಪತ್ರೆಗೆ ಬರುವ ಇತರೆ ರೋಗಿಗಳು, ಜನರಿಗೂ ಡೆಂಘಿಯಿಂದ ರಕ್ಷಣೆ ನೀಡಲು ಸೊಳ್ಳೆ ಔಷಧ ನಿಯಂತ್ರಕ ರಿಪ್ಲೀಕೆಂಟ್ ಅಳವಡಿಸಿದೆ. ಡೆಂಗ್ಯೂ ಆಸ್ಪತ್ರೆಗಳಿಂದ ಹರಡದಂತೆ ಹಾಗೂ ಸೊಳ್ಳೆಗಳು ಬರದಂತೆ ತಡೆಯಲು ಜಯನಗರ ಆಸ್ಪತ್ರೆ ಮುಂದಾಗಿದೆ.