ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಪ್ರಜ್ವಲ್ ಪೆನ್ಡ್ರೈವ್ ಕೇಸ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಂಕಷ್ಟ ಎದುರಾಗಿದೆ. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ಭಾಷಣ ಮಾಡಿದ್ದ ರಾಹುಲ್ ಗಾಂಧಿಯವರು ಪ್ರಜ್ವಲ್ನ ʻಸಾಮೂಹಿಕ ಅತ್ಯಾಚಾರಿʼ ಎಂದಿದ್ದರು. ಇದರ ಹಿನ್ನೆಲೆಯಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ರಾಮು ಎಂಬುವರಿಂದ ರಾಹುಲ್ ಗಾಂಧಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಪ್ರಜ್ವಲ್ ರೇವಣ್ಣ ವಿರುದ್ಧ ಇದೂವರೆಗೆ ಆರೋಪ ಸಾಬೀತಾಗಿಲ್ಲ, ಸಾಕ್ಷ್ಯಾಧಾರಗಳು ಲಭಿಸಿಲ್ಲ. ರಾಹುಲ್ ಗಾಂಧಿಯವರು ಹೇಳಿರುವಂತೆ ಯಾವ ಮಹಿಳೆಯರೂ ದೂರು ನೀಡಿಲ್ಲ, ಆದರೂ ಪ್ರಜ್ವಲ್ರನ್ನ ಸಾಮೂಹಿಕ ಅತ್ಯಾಚಾರಿ ಎಂದು ನಿಂದಿಸಿದ್ದಾರೆ. ಹೀಗಾಗಿ ರಾಹುಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರಾಹುಲ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಲಾಗಿದೆ.