ಮಹಾರಾಷ್ಟ್ರದ ಪುಣೆಯಲ್ಲಿ ಮಳೆಯಾರ್ಭಟ ಮುಂದುವರೆದಿದೆ. ವರುಣನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಕ್ಕಸ ಮಳೆಗೆ ನಾಲ್ವರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಮಳೆಯಿಂದಾಗಿ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ್ದಾರೆ. ಭೂ ಕುಸಿತದಿಂದ ಓರ್ವ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ. ಮಳೆಯಿಂದಾಗುವ ಅವಾಂತರವನ್ನು ಗಮನಿಸಿ ಅಲ್ಲಿನ ಜಿಲ್ಲಾಡಳಿತ ಎಚ್ಚರಿಕೆವಹಿಸಿದೆ. ಮಳೆಯ ಮುನ್ನೆಚ್ಚರಿಕೆಯ ಕ್ರಮವಾಗಿ ಪುಣೆಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ಮಕ್ಕಳಿಗೆ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ.
ಸಿಎಂ ಏಕನಾಥ್ ಶಿಂಧೆ ಇಂಡಿಯನ್ ಆರ್ಮಿ ಜೊತೆಗೆ ಮಾತಾಡಿದ್ದಾರೆ. ಪ್ರಸ್ತುತ ಸ್ಥಿತಿಯ ಬಗ್ಗೆ ಅರಿತುಕೊಂಡಿದ್ದಾರೆ. ಪುಣೆಯಲ್ಲಿ ಜನರ ರಕ್ಷಣೆಗಾಗಿ ಇಂಡಿಯನ್ ಏರ್ ಪೋರ್ಸ್, ಇಂಡಿಯನ್ ಆರ್ಮಿ ಅಲರ್ಟ್ ಆಗಿದೆ. ಅಗತ್ಯ ಬಿದ್ದಲ್ಲಿ ಹೆಲಿಕಾಪ್ಟರ್ ಮೂಲಕ ಜನರ ರಕ್ಷಣೆ ಮಾಡಲು ಸೂಚನೆ ಹೊರಡಿಸಲಾಗಿದೆ. ನಾಳೆಯವರೆಗೂ ಪುಣೆ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆಯಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ಹೊರಡಿಸಲಾಗಿದೆ.