ಬಿಬಿಎಂಪಿ ಗುತ್ತಿಗೆದಾರನಿಗೆ ಕಿರುಕುಳ, ಜಾತಿ ನಿಂದನೆ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದಿಗೆ ಕಾಯ್ದಿರಿಸಿದೆ. ಬುಧವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಲಿದ್ದು, ಮುನಿರತ್ನ ಅವರ ಭವಿಷ್ಯದ ಜೈಲುವಾಸದ ಬಗ್ಗೆ ನಿರ್ಧಾರವಾಗಲಿದೆ.
ಮುನಿರತ್ನ ಪರವಾದ ಮಂಡಿಸಿದ ವಕೀಲರು, ಪೊಲೀಸರು ತಮ್ಮ ಕಕ್ಷಿದಾರರಿಗೆ ನೋಟಿಸ್ ನೀಡದೆ ಬಂಧಿಸಿದ್ದಾರೆ. ಪೊಲೀಸರು ಆತುರದಲ್ಲಿ ಬಂಧಿಸಿದ್ದಾರೆ. ಗುತ್ತಿಗೆದಾರ ಚಲುವರಾಜು ತಮ್ಮ ಕಕ್ಷಿದಾರರ ಜೊತೆ ನಡೆಸಿರುವ ಮೊಬೈಲ್ ಸಂಭಾಷಣೆಯನ್ನು ದಾಖಲಿಸಿಕೊಂಡು ಸಾರ್ವಜನಿಕವಾಗಿ ಹಂಚಿದ್ದಾರೆ. ಇದು ಪ್ರಕರಣದಲ್ಲಿ ಶಾಸಕರನ್ನು ಸಿಲುಕಿಸಬೇಕೆಂಬ ಹುನ್ನಾರವಿದೆ. ವಿಚಾರಣೆಗೆ ಸಂಪೂರ್ಣ ಸಹಕಾರ ಕೊಡುವುದರಿಂದ ನ್ಯಾಯಾಲಯ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ತೀವ್ರ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರು, ಶಾಸಕರು ದುರುದ್ದೇಶ ಪೂರ್ವಕವಾಗಿಯೇ ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಜಾತಿ ನಿಂದನೆ ಪ್ರಕರಣದಲ್ಲಿ ನೊಟೀಸ್ ನೀಡದೆ ವಿಚಾ ರಣೆಗೆ ಹಾಜರಾಗುವಂತೆ ತಿಳಿಸಬಹುದು. ಅಗತ್ಯವಿದ್ದರೆ ತನಿಖಾಧಿಕಾರಿಗಳು ಬಂಧಿಸ ಬಹುದು. ಇಲ್ಲಿ ಪೊಲೀಸರ ಕ್ರಮ ಕಾನೂನಿನ ಪ್ರಕಾರವಾಗಿಯೇ ನಡೆದಿದೆ ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿ ಗುರುವಾರಕ್ಕೆ ಮುಂದೂಡಿಕೆ ಮಾಡಿದರು.