ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ದತೆ ಜೋರಾಗಿಯೇ ನಡೆಯುತ್ತಿದೆ. ದಸರಾದ ಕೇಂದ್ರ ಬಿಂದುವಾಗಿರುವ ಗಜಪಡೆ ಮೈಸೂರಿಗೆ ಬಂದಿದೆ. ಆನೆಗಳು ಈಗಾಗಲೇ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದು, ಮೈಸೂರಿನಲ್ಲಿ ಪರೆಡ್ ನಡೆಸುತ್ತಿವೆ. ದೇವರಾಜ ಮೊಹಲ್ಲಾದಲ್ಲಿರುವ ಸಾಯಿ ತೂಕ ಮಾಪನ ಕೇಂದ್ರದಲ್ಲಿ ಇಂದು (ಆಗಸ್ಟ್ 24) ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ತೂಕ ಮಾಪನ ಮಾಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಆನೆಗಳು ಮೈಸೂರಿಗೆ ಕಾಲಿಡುತ್ತಿದ್ದಂತೆ ತೂಕ ಮಾಪನ ಮಾಡಲಾಯಿತು. ಮೈಸೂರು ದಸರಾದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು. ಈತನ ತೂಕ 5560 ಕೆಜಿ ಇದೆ. ಈತನ ಜೊತೆಗಾರ್ತಿ ವರಲಕ್ಷ್ಮೀಯ ತೂಕ 3495 ಕೆಜಿ ಇದೆ. ಇನ್ನು ಭೀಮ 4925 ಕೆಜಿ ತೂಕ ಇದ್ದಾನೆ. ರೋಹಿತ್ 3625, ಗೋಪಿ 4970, ಕಂಜನ್ 4515, ಧನಂಜಯ 5155 ಕೆಜಿ ತೂಕ ಇದ್ದಾನೆ.
ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಅರ್ಜುನನ ಉತ್ತರಾಧಿಕಾರಿ ಎಂದೇ ಖ್ಯಾತಿ ಗಳಿಸಿರುವ ಏಕಲವ್ಯ 4730 ಕೆಜಿ ತೂಕ ಇದ್ದಾನೆ. ಈತನ ಜೊತೆಗಾರ್ತಿ ಲಕ್ಷ್ಮೀ 2480 ಕೆಜಿ ತೂಕ ಇದ್ದಾಳೆ. ಮೈಸೂರು ದಸರಾ ಜಂಬೂ ಸವಾರಿಗೆ ಮೊದಲ ಹಂತದಲ್ಲಿ ಕಾಡಿನಿಂದ ನಾಡಿಗೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಬಂದಿವೆ.
ಕ್ಯಾಪ್ಟನ್ ಅಭಿಮನ್ಯು, ಧನಂಜಯ, ಗೋಪಿ, ಭೀಮ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮಿ, ಲಕ್ಷ್ಮಿ ಆಗಮಿಸಿದ್ದಾರೆ. ಎರಡನೇ ಹಂತದಲ್ಲಿ ಪ್ರಶಾಂತ, ಮಹೇಂದ್ರ, ಸುಗ್ರೀವ, ಲಕ್ಷ್ಮಿ, ಹಿರಣ್ಯ ಆನೆಗಳು ಮೈಸೂರಿಗೆ ಬರಲಿವೆ. ಹರ್ಷ, ಅಯ್ಯಪ್ಪ, ಪಾರ್ಥಸಾರಥಿ, ಮಾಲಾದೇವಿ ಮೀಸಲು ಆನೆಗಳಾಗಿವೆ.