ಕಲಾಪ ಆರಂಭವಾದರೂ ವಿಪಕ್ಷ ನಾಯಕ ಇಲ್ಲ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕನ ಆಯ್ಕೆ ಬಿಜೆಪಿಯಲ್ಲಿ ಕಗ್ಗಂಟಾಗಿ ಪರಿಣಮಿ ಸಿದ್ದು, ಅಧಿವೇಶನ ಆರಂಭವಾಗಿ ಎರಡು ದಿನಗಳಾದರೂ ಪ್ರತಿಪಕ್ಷದ ನಾಯಕನ ನೇಮಕವಾಗಿಲ್ಲ. ಇದೀಗ ಪ್ರಮುಖವಾಗಿ ಪ್ರಸ್ತಾಪವಾಗುತ್ತಿರುವ ಅಂಶ ಎಂದರೆ, ಮೊದಲ ಬಾರಿಗೆ ಪರಿಷತ್ ಪ್ರವೇಶಿಸಿರುವ ಸಿ.ಟಿ.ರವಿ ಅವರನ್ನು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಪರಿಗಣಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು.
ಬಿಜೆಪಿ ವರಿಷ್ಠರಲ್ಲಿ ಸಿ.ಟಿ.ರವಿ ಅವರನ್ನು ನೇಮಕ ಮಾಡುವ ಬಗ್ಗೆಯೇ ಜಿಜ್ಞಾಸೆ ನಡೆದಿದೆ ಎನ್ನಲಾಗಿದೆ. ಹಾಗೆ ನೋಡಿದರೆ ಪ್ರತಿಪಕ್ಷ ನಾಯಕನ ನೇಮಕ ಮಾಡದೆ ಇರುವುದು ಬಿಜೆಪಿಗೆ ಅಭ್ಯಾಸವಾಗಿ ಹೋಗಿದೆ. ಕಳೆದ ವಿಧಾನಸಭಾ ಚುನಾವಣೆ ಬಳಿಕ ಸುಮಾರು ಆರು ತಿಂಗಳವರೆಗೆ ಉಭಯ ಸದನಗಳಲ್ಲೂ ಬಿಜೆಪಿಯು ಪ್ರತಿಪಕ್ಷ ನಾಯಕರ ನೇಮಕ ಮಾಡಿರಲಿಲ್ಲ. ಅದು ಇದೀಗ ಮತ್ತೊಮ್ಮೆ ಪರಿಷತ್ತಿನಲ್ಲಿ ಪುನರಾವರ್ತನೆಯಾಗುತ್ತಿದೆ. ಇದುವರೆಗೆ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದ ಕೋಟ ಶ್ರೀನಿವಾಸ್ ಪೂಜಾರಿ ಅವರು ಲೋಕಸಭೆ ಪ್ರವೇಶಿಸಿರುವುದರಿಂದ ಆ ಸ್ಥಾನ ತೆರವಾಗಿದೆ. ಇದೀಗ ಆ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬ ಚರ್ಚೆ ಪಕ್ಷದಲ್ಲಿ ನಡೆದಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಆರ್. ಅಶೋಕ್ ಅವರನ್ನು ನೇಮಿಸಿರುವುದರಿಂದ ಜಾತಿ ಸಮೀಕರಣದ ಆಧಾರದ ಮೇಲೆ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕನ ಸ್ಥಾನವನ್ನು ಇತರ ಹಿಂದುಳಿದ ವರ್ಗ ಅಥವಾ ಪರಿಶಿಷ್ಟ ಜಾತಿಗೆ ಸೇರಿದವರನ್ನು ಪರಿಗಣಿಸುವ ಉದ್ದೇಶ ಹೊಂದಲಾಗಿದೆ. ಆ ಪ್ರಕಾರ, ಎನ್. ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಪ್ರಸ್ತಾಪವಾಗಿತ್ತು. ಆದರೆ, ಇದೀಗ ಒಕ್ಕಲಿಗ ಸಮುದಾಯದ ಸಿ.ಟಿ.ರವಿ ಅವರೂ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿರುವುದು ನೇಮಕ ನಿರ್ಧಾರ ಅಂತಿಮಗೊಳಿಸಲು ಬಂದಿದೆ.
ಪ್ರತಿಪಕ್ಷನಾಯಕನ ಅನುಭವ ಮತ್ತು ರಾಜಕೀಯ ಹಿರಿತನದ ಆಧಾರದ ಮೇಲೆ ಸಿ.ಟಿ.ರವಿ ಅವರ ನೇಮಕ ಪ್ರಮುಖ ಅಡ್ಡಿಯಾಗಿದೆ ಎಂದು ತಿಳಿದು ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದರೂ ಯಾವುದೇ ಹೆಸರನ್ನು ಶಿಫಾರಸು ಮಾಡದೆ ಹೈಕಮಾಂಡ್ ಜತೆ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ಅವರು ಸಮಾಲೋಚನೆ ನಡೆಸಿ ಅಂತಿಮಗೊಳಿಸಬೇಕು ಎಂಬ ನಿರ್ಣಯದ ಬಗ್ಗೆ ಪಕ್ಷದಲ್ಲಿ ಅಪಸ್ವರವೇನೂ ಇಲ್ಲ. ಆದರೆ, ಬಹುತೇಕ ಸ್ಥಾನಗಳನ್ನು ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೇ ನೀಡಿದರೆ ಹಿಂದುಳಿದ ವರ್ಗಗಳಿಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ ಎಂಬ ಆತಂಕ ಪಕ್ಷದಲ್ಲಿದೆ. ಹೀಗಾಗಿಯೇ ಆ ಸ್ಥಾನವನ್ನು ಪರಿಷತ್ತಿನ ಹಿಂದುಳಿದ ವರ್ಗಗಳಿಗೆ ಸೇರಿದ ಸದಸ್ಯರಿಗೇ ನೀಡಬೇಕು ಎಂಬ ಅಭಿಪ್ರಾಯ ಹೆಚ್ಚಾಗಿದೆ. ಆ ಪೈಕಿ ರವಿಕುಮಾರ್ ಪರವಾಗಿ ಹೆಚ್ಚಿನ ಒಲವು ವ್ಯಕ್ತವಾಗಿದೆ.