ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಸಕ್ತ ವರ್ಷದ ಎಂಬಿಎ ಮತ್ತು ಎಂಸಿಎ ಕೋರ್ಸ್ಗಳ ಪ್ರವೇಶಾತಿಗೆ ಆ.4ರಂದು ಪಿಜಿಸಿಇಟಿ ಪರೀಕ್ಷೆ ಘೋಷಿಸಿದೆ. ಇದೇ ಸಮಯದಲ್ಲೇ ಬಿಬಿಎ, ಬಿಸಿಎ ಸೇರಿ ವಿವಿಧ ಪದವಿ ಕಾಲೇಜುಗಳ ಕೊನೇಯ ಸೆಮಿಸ್ಟರ್ ಸೇರಿ ವಿವಿಧ ಸೆಮಿಸ್ಟರ್ಗಳ ಪರೀಕ್ಷೆಯನ್ನು ಕರ್ನಾಟಕ ವಿವಿ ಘೋಷಣೆ ಮಾಡಿದ್ದು, ಇದು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಕರ್ನಾಟಕ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ಪರೀಕ್ಷೆಗಳನ್ನು ಆ.1ರಿಂದ 7ರ ವರೆಗೆ ಘೋಷಣೆ ಮಾಡಲಾಗಿದೆ. ಪದವಿ ಪರೀಕ್ಷೆಗಳನ್ನು ಬರೆಯಬೇಕೋ ಅಥವಾ ಪದವಿ ನಂತರದ ಮುಂದಿನ ಹಂತದ ಪಿಜಿಸಿಇಟಿ ಪರೀಕ್ಷೆಗಳನ್ನು ಬರೆಯಬೇಕೋ ಎಂಬ ಗೊಂದಲ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಕೋವಿಡ್ ನಂತರದಲ್ಲಿ ಸೆಮಿಸ್ಟರ್ ಕೋರ್ಸ್ ಪರೀಕ್ಷೆಗಳು ತಡವಾಗಿದ್ದು, ಇಂಥ ಅವಾಂತರಕ್ಕೆ ಕಾರಣವಾಗುತ್ತಿದೆ.
ಎಂಬಿಎ ಹಾಗೂ ಎಂಸಿಎ ಸ್ನಾತಕೋತ್ತರ ಪದವಿಗೆ ಕಡ್ಡಾಯವಾಗಿ ಬಿಸಿಎ, ಬಿಬಿಎಯಂಥ ಪದವಿ ಮಾಡಿರಬೇಕು. ಆ ಪದವಿ ಪರೀಕ್ಷೆಗಳ ಓದಿನೊಂದಿಗೆ ಈಗ ಪಿಜಿಸಿಇಟಿ ಹೇಗೆ ಬರೆಯಬೇಕು ಎನ್ನುವುದು ವಿದ್ಯಾರ್ಥಿಗಳ ಪ್ರಶ್ನೆ. ಎಂಬಿಎ ಕೋರ್ಸ್ನ ಪಿಜಿಸಿಇಟಿ ಬರೆಯಲು ಹುಬ್ಬಳ್ಳಿ ಅಥವಾ ಬೆಂಗಳೂರು ಸೆಂಟರ್ ಆಯ್ಕೆ ಮಾಡಿದ್ದೇವೆ. ಹುಬ್ಬಳ್ಳಿ ಬದಲು ಆ.4ರಂದು ಬೆಂಗಳೂರು ಕೇಂದ್ರಕ್ಕೆ ಪರೀಕ್ಷೆ ಬರೆಯಲು ಹೋಗುವ ಸಂದರ್ಭ ಬಂದರೆ, ಆ.3ರರಂದು ಪದವಿ ಪರೀಕ್ಷೆ ಮುಗಿಸಿ ಅಂದೇ ರಾತ್ರಿ ಬೆಂಗಳೂರಿಗೆ ಹೋಗಿ ಆ.4ರಂದು ಪಿಜಿ ಸಿಇಟಿ ಬರೆದು ಮತ್ತೆ ಆ.5ರಂದು ಮುಂದಿನ ಪದವಿ ಪರೀಕ್ಷೆ ಬರೆಯಬೇಕಾದ ಸ್ಥಿತಿ ಉಂಟಾಗಿದೆ. ಆದ್ದರಿಂದ ಕರ್ನಾಟಕ ವಿವಿ ಪರೀಕ್ಷೆಗಳನ್ನು ಮುಂದೂಡಿದರೆ ಒಳಿತು. ಇಲ್ಲದೇ ಹೋದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ವಿನಯ ಎಂಬ ವಿದ್ಯಾರ್ಥಿ ಕವಿವಿಗೆ ಮನವಿ ಮಾಡಿದರು.