ಬೆಂಗಳೂರು: ಗುತ್ತಿಗೆದಾರ ಸಚಿನ್ ಸಾವಿನ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂದು ತಿಳಿಸಿರುವ ವಿಧಾನಪರಿಷತ್ ಸದಸ್ಯ ಎನ್ . ರವಿಕುಮಾರ್ ಅವರು, ಪ್ರಿಯಾಂಕ ಖರ್ಗೆಯವರು ಮೊದಲು ರಾಜೀನಾಮೆ ಕೊಡಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಮಕ್ಕಳ ದುರ್ಬಳಕೆಯ ಸಂಚು ಸೇರಿದಂತೆ ಅನೇಕ ವಿಷಯಗಳು ಸಚಿನ್ ಡೆತ್ ನೋಟಿನಲ್ಲಿವೆ ಎಂದು ವಿವರಿಸಿದರು. ತನಿಖೆ ನಡೆಯಲೆಂದು ಮುಂಚಿತವಾಗಿ ತಿಳಿಸಿದರೆ ಬಚಾವ್ ಆಗಬಹುದೆಂದು ಪ್ರಿಯಾಂಕ್ ಅವರು ಪತ್ರಿಕಾಗೋಷ್ಠಿ ಮಾಡಿದ್ದಾರೆ ಎಂದು ಆರೋಪಿಸಿದರು.
ಈಶ್ವರಪ್ಪನವರ ರಾಜೀನಾಮೆ ಪಡೆದ ದಾರಿಯಲ್ಲೇ ರಾಜೀನಾಮೆ ಕೊಡಬೇಕು; ನಿಮ್ಮ ಪಾತ್ರ ಏನೂ ಇಲ್ಲ ಎಂದು ಗೊತ್ತಾದರೆ ನೀವು ಮುಖ್ಯಮಂತ್ರಿಯಾದರೂ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು. ನಾವು ಸುಲಭವಾಗಿ ಬಿಡುವುದಿಲ್ಲ; ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಅವರು ಪ್ರಕಟಿಸಿದರು.
ವಿಪಕ್ಷ ನಾಯಕರು, ನಮ್ಮ ಕಾರ್ಯಕರ್ತರ ಮೇಲೆ ಸುಲಭವಾಗಿ ಎಫ್ಐಆರ್ ಆಗುತ್ತಿದೆ. ಆದರೆ, ವಿಪಕ್ಷದವರು ಆಡಳಿತ ಪಕ್ಷದವರ ಮೇಲೆ ದೂರು ನೀಡಿದರೆ, ಎಫ್ಐಆರ್ ಆಗುತ್ತಿಲ್ಲ. ಯಾಕೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿ.ಟಿ.ರವಿಯವರು ಕೊಟ್ಟ ದೂರಿನ ಎಫ್ಐಆರ್ ಮಾಡಿಲ್ಲ; ಎಫ್ಐಆರ್ ಮಾಡದೆ ಅವರನ್ನು ರಾತ್ರಿಯೆಲ್ಲ ಸುತ್ತಾಡಿಸಿದ್ದಾರೆ. ಗುಲ್ಬರ್ಗದಲ್ಲಿ ಕೂಡ ಎಫ್ಐಆರ್ ಮಾಡಿಲ್ಲ; ಕೋರ್ಟ್ ನಿರ್ದೇಶನ ನೀಡಬೇಕಾಯಿತು ಎಂದು ಗಮನ ಸೆಳೆದರು. ನಾಳೆಯೇ ಬಿಜೆಪಿ ಸತ್ಯಶೋಧನಾ ಸಮಿತಿಯು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ತೂಗಾಂವ್ ಕಟ್ಟೆಗೆ ಭೇಟಿ ಕೊಡಲಿದೆ ಎಂದು ರವಿಕುಮಾರ್ ವಿವರ ನೀಡಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಾನು (ರವಿಕುಮಾರ್), ನಮ್ಮ ಗುಲ್ಬರ್ಗದ ಶಾಸಕ ಬಸವರಾಜ ಮತ್ತಿಮೂಡ, ಬೀದರ್ ಶಾಸಕ ಶೈಲೇಂದ್ರ ಬೆಲ್ದಾಳೆ, ಬಸವಕಲ್ಯಾಣದ ಶಾಸಕ ಶರಣು ಸಲಗಾರ್, ಹುಮ್ನಾಬಾದ್ ಶಾಸಕ ಸಿದ್ದು ಪಾಟೀಲ್, ಬೀದರ್ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, ಗುಲ್ಬರ್ಗ ಜಿಲ್ಲಾ ಅಧ್ಯಕ್ಷರಾದ ಚಂದು ಪಾಟೀಲ್, ಶಿವರಾಜ್ ಪಾಟೀಲ್ ಅವರು ಈ ಸಮಿತಿಯಲ್ಲಿ ಇರುತ್ತಾರೆ ಎಂದು ವಿವರಿಸಿದರು. ನಮ್ಮ ಈ ನಿಯೋಗವು ಭಾಲ್ಕಿ ತಾಲ್ಲೂಕಿನ ತೂಗಾಂವ್ ಕಟ್ಟೆಗೆ ನಾಳೆ ಸಂಜೆ ಭೇಟಿ ಕೊಡುತ್ತದೆ. ಸಚಿನ್ ಮನೆಗೆ ತೆರಳಿ ವಿವರ ಪಡೆಯುತ್ತೇವೆ. ಬೆಂಗಳೂರಿನಲ್ಲಿ ಪ್ರತಿಭಟನೆ ಕುರಿತು ನಂತರ ತಿಳಿಸುವುದಾಗಿ ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಸರ್ವಾಧಿಕಾರ ತಾಂಡವವಾಡುತ್ತಿದೆ. ಸಿದ್ದರಾಮಯ್ಯನವರು ಪ್ರಜಾಪ್ರಭುತ್ವವಾದಿ, ಸಮಾಜವಾದಿ ಎಂದು ಹೇಳುತ್ತಿದ್ದು, ಅದೆಲ್ಲ ಬೋಗಸ್, ಬೂಸಾ ಎಂದು ಟೀಕಿಸಿದರು. ಸಚಿನ್ ಬರೆದ ಪತ್ರದ ಮಾಹಿತಿಯ ಇಂಚಿಂಚನ್ನೂ ರಾಜ್ಯದಲ್ಲಿ ನಾವು ಪ್ರಚಾರ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಈ ಸರಕಾರಕ್ಕೆ ಮಾನ, ಮರ್ಯಾದೆ ಇದೆಯೇ? ಎಷ್ಟು ಅಧಿಕಾರಿಗಳು ಸಾಯುತ್ತಿದ್ದಾರೆ? ಇನ್ನೂ ಎಷ್ಟು ಜನ ಬಾಣಂತಿಯರು ಸಾವನ್ನಪ್ಪುತ್ತಿದ್ದಾರೆ? ಎಂದ ಅವರು, ಆಸ್ಪತ್ರೆಗಳು, ಶಾಲೆ, ಕಾಲೇಜುಗಳು ಗಬ್ಬುನಾರುತ್ತಿವೆ. ಹೇಳೋರಿಲ್ಲ; ಕೇಳೋರಿಲ್ಲ ಎಂಬಂತಾಗಿದೆ. ರಸ್ತೆ ಗುಂಡಿಗಳು ಹಾಳು ಬಿದ್ದು ಹೋಗಿದೆ. ಸರಕಾರ ದುಡ್ಡಿಲ್ಲದೆ ಪಾಪರ್ ಆಗಿದೆ. ಸುಮ್ಮನೆ ಭಾಷಣ ಬಿಗಿಯುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಈ ಸರಕಾರದ ವಿರುದ್ಧ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಹೇಳಿದರು. ಪಕ್ಷದ ಮುಖಂಡ ಜಗದೀಶ್ ಹಿರೇಮನಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.