ಇಂಧನ ಪರಿವರ್ತನೆ ವಿಚಾರದಲ್ಲಿ ಹಸಿರು ಜಲಜನಕದಂಥ ಹೊಸ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವುದು ಅಗತ್ಯ. ತಾಪಮಾನ ಬದಲಾವಣೆ ನಿರ್ವಹಣೆಗೆ ಇದು ಅವಶ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪ್ರತಿಪಾದಿಸಿದ್ದಾರೆ.
ಇದು ಭವಿಷ್ಯದ ವಿಚಾರವಾಗಿರದೆ ತಕ್ಷಣವೇ ಕಾರ್ಯಪ್ರವೃತ್ತವಾಗುವುದು ಅನಿವಾರ್ಯ ಎಂದು ದ್ವಿತೀಯ ಅಂತಾರಾಷ್ಟ್ರೀಯ ಹಸಿರು ಜಲಜನಕ ಭಾರತ 2024 ಸಮ್ಮೇಳನಕ್ಕೆ ಕಳಿಸಿದ ವಿಡಿಯೋ ಸಂದೇಶದಲ್ಲಿ ಮೋದಿ ಹೇಳಿದ್ದಾರೆ. ಜಾಗತಿಕ ನೀತಿ ನಿರೂಪಣೆಯಲ್ಲಿ ಇಂಧನ ಪರಿವರ್ತನೆ ಮತ್ತು ಸುಸ್ಥಿರತೆಯು ಪ್ರಧಾನ ವಿಚಾರಗಳಾಗಿವೆ ಎಂದು ಕೂಡ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
ಹಸಿರು ಜಲಜನಕವು ಜಗತ್ತಿನ ಇಂಧನ ಕ್ಷೇತ್ರಕ್ಕೆ ಭರವಸೆಯ ಸೇರ್ಪಡೆ ಆಗುತ್ತಿದೆ ಎಂದ ಮೋದಿ, ಕೈಗಾರಿಕೆಗಳನ್ನು ಕಾರ್ಬನ್ ರಹಿತಗೊಳಿಸಲು ಅದು ನೆರವಾಗಲಿದೆ ಎಂದಿದ್ದಾರೆ. ಸಂಸ್ಕರಣಾಗರಗಳು, ರಸಗೊಬ್ಬರ, ಉಕ್ಕು, ಭಾರ ಸಾಗಾಟ ಮುಂತಾದ ಅನೇಕ ವಲಯಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದಿದ್ದಾರೆ. ಹೆಚ್ಚುವರಿಯಾದ ನವೀಕರಿಸಬಹುದಾದ ಇಂಧನದ ಶೇಖರಣೆ ಪರಿಹಾರಕ್ಕೂ ಹಸಿರು ಹೈಡ್ರೋಜನ್ ಕೆಲಸ ಮಾಡಲಿದೆ ಎಂದು ಮೋದಿ ವಿವರಿಸಿದ್ದಾರೆ. ಭಾರತ ಆಗಲೇ ರಾಷ್ಟ್ರೀಯ ಹಸಿರು ಜಲಜನಕ ಮಿಷನ್-2023ನ್ನು ಆರಂಭಿಸಿದೆ ಎಂದೂ ಹೇಳಿದರು.