ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಅನ್ನು ಕೆಲ ದಿನಗಳ ಹಿಂದಷ್ಟೆ ಪರಪ್ಪನ ಅಗ್ರಹಾರದಲ್ಲಿ ಭೇಟಿಯಾಗಿದ್ದ ನಟ ವಿನೋದ್ ರಾಜ್ ಇಂದು ಚಿತ್ರದುರ್ಗಕ್ಕೆ ತೆರಳಿ ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ. ಕುಟುಂಬಕ್ಕೆ ಹಣ ಸಹಾಯವನ್ನೂ ಮಾಡಿದ್ದಾರೆ.
ಬೆಳಿಗ್ಗೆಯೇ ಚಿತ್ರದುರ್ಗಕ್ಕೆ ತೆರಳಿದ ನಟ ವಿನೋದ್ ರಾಜ್, ‘ಮನೆಗೆ ಆಧಾರ ಸ್ತಂಭವಾದ ಮಗನನ್ನು ಕಳೆದುಕೊಂಡಿದ್ದಾರೆ. ಕುಟುಂಬ ಪರಿತಪಿಸುತ್ತಿರುವ ಸ್ಥಿತಿ ಕಂಡು ಕರಳುಕಿತ್ತು ಬರ್ತಿದೆ. ನಾವು ಮನುಷ್ಯರಾಗಿದ್ದೀವಾ ಅಂತ ಮುಟ್ಟಿ ನೋಡಿಕೊಳ್ಳುವ ಕಾಲ. ಪ್ರತಿಯೊಂದು ಜೀವಿಗೂ ಜೀವವಿದೆ, ಮಕ್ಕಳು ಬಾಳಬೇಕು, ಬೆಳೆದು ಬೆಳಗಬೇಕು ಅಂತ ತಂದೆ ತಾಯಿ ಬೆಳೆಸುವರು, ಕೆಟ್ಟದ್ದು ಜಾಸ್ತಿಯಾದಾಗ ಇಂತಹ ಕೃತ್ಯ ನಡೆಯುವವು, ಇಂತಹ ಘಟನೆ ಹೆಚ್ಚಾಗದಂತೆ ಎಚ್ಚೆತ್ತುಕೊಬೇಕು’ . ‘ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡುತ್ತಾರೆ. ಹೀಗೆ ಆಗಿರುವುದು ಆಘಾತಕಾರಿ ವಿಷಯ. ಹೆಸರು, ಕೀರ್ತಿಯಲ್ಲಿರುವ ನಾವು ಎಚ್ಚರವಾಗಿರಬೇಕು, ನಮ್ಮ ಉನ್ನತವಾದ ಸ್ಥಾನ ಎತ್ತರದ ಮಟ್ಟದಲ್ಲಿರುವವರು ವಿವೇಕ ಮರೆಯಬಾರದು, ಅಚಾತುರ್ಯ ನಡೆಯುತ್ತವೆ, ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು, ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು’ ಎಂದು ವಿನೋದ್ ರಾಜ್ಕುಮಾರ್ ಹೇಳಿದರು.