ಇನ್ನು ಮೂರು ಉಪ ಚುನಾವಣೆ ಬರುತ್ತಿವೆ. ಮುಸ್ಲಿಮರನ್ನು ಸಂತೃಪ್ತಿ ಪಡಿಸಲು ರಾಮನಗರ ಹೆಸರು ಬದಲಾವಣೆ ಮಾಡುತ್ತಿದ್ದಾರೆ. ರಾಮ ಎನ್ನುವ ಹೆಸರಿದ್ದರೆ ನಿಮಗೆ ಸಮಸ್ಯೆ ಏನು ? ಹಿಂದುತ್ವದ ಹೆಸರು ಬಂದರೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ಗೆ ದೆವ್ವ ಬಂದ ಹಾಗೆ ಆಗುತ್ತದೆ. ರಾಮನಗರದ ಹೆಸರು ರಾಮನಗರ ಎಂದೇ ಇರಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಹಿಂದ ವರ್ಗಕ್ಕೆ ವೋಟು ಕೊಡಿ ಒಳ್ಳೆಯ ಕೆಲಸ ಮಾಡುತ್ತೇವೆ ಎಂದರು. ಜನ ನಂಬಿ ಮತ ಹಾಕಿ ಗೆಲ್ಲಿಸಿದರು. ಆದರೆ ಹಿಂದುಳಿದ ವರ್ಗಕ್ಕೆ ಮೀಸಲಿಟ್ಟಿದ್ದ 312 ಕೋಟಿ ಹಣ ರದ್ದು ಮಾಡಿದ್ದಾರೆ. ಜುಲೈ 12 ರಂದು ಅನುದಾನ ವಾಪಸ್ ಪಡೆದಿದ್ದಾರೆ. ಎಸ್ಸಿ, ಎಸ್ಟಿ ಹಣವನ್ನು ವಾಪಸ್ ತೆಗೆದುಕೊಂಡಿದ್ದರು. ಗ್ಯಾರಂಟಿ ಯೋಜನೆಗೆ ಬಳಸಿದ್ದಾರೋ ಯಾವುದಕ್ಕೆ ಬಳಸಿದ್ದಾರೋ ಗೊತ್ತಿಲ್ಲ. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಕ್ಕೆ ಮೀಸಲಿಟ್ಟಿದ್ದ ಹಣವನ್ನು ಆ ಸಮುದಾಯಕ್ಕೆ ಕೊಡಬೇಕು. ಈ ಹಣ ವಾಪಸ್ ಕೊಟ್ಟರೆ ಆ ಸಮುದಾಯ ಉದ್ಧಾರ ಆಗುತ್ತದೆ. ರಾಜಕಾರಣಕ್ಕೆ ಹೇಳಿಕೆ ಕೊಟ್ಟರೆ ಏನು ಪ್ರಯೋಜನ ಇಲ್ಲ. ಆ ಸಮುದಾಯಕ್ಕೆ ಹಣ ಕೊಡಬೇಕು ಎಂದರು.