ಪ್ಯಾರಿಸ್ ಒಲಿಂಪಿಕ್ಸ್ ಅವಳಿ ಕಂಚಿನ ಪದಕ ವಿಜೇತೆ, ಶೂಟರ್ ಮನು ಭಾಕರ್ ಬುಧವಾರ ತವರಿಗೆ ಮರಳಿದ್ದರು. ನವದೆಹಲಿಗೆ ಬಂದಿಳಿದಿದ್ದ ಮನುಗೆ ಹಾರ ಮತ್ತು ಗುಲಾಬಿ ದಳಗಳ ಅಭಿಷೇಕದೊಂದಿಗೆ ಕ್ರೀಡಾಪ್ರೇಮಿಗಳು ಭರ್ಜರಿಯಾಗಿ ಸ್ವಾಗತ ಕೋರಿದ್ದರು. ಬಳಿಕ ತೆರೆದ ಜೀಪ್ನಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಲಾಗಿತ್ತು. ಈ ಎಲ್ಲ ಕಾರ್ಯಕ್ರಮ ಮುಗಿದ ಬಳಿಕ ಮನು ಭಾಕರ್ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೊ ವೈರಲ್ ಆಗಿದೆ. ಜತೆಗೆ ಚರ್ಚೆಗೂ ಕಾರಣವಾಗಿದೆ.
ಮನು ಭಾಕರ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಫೋಟೊ ಕಂಡ ಕೆಲ ನೆಟ್ಟಿಗರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಮುನ್ನ ಸೋನಿಯಾ ಗಾಂಧಿಯನ್ನು ಭೇಟಿಯಾದದ್ದು ಏಕೆ? ಎಂದು ಪ್ರಶ್ನಿಸಿದರೆ. ಇನ್ನು ಕೆಲವರು ಪ್ರಧಾನಿಯನ್ನೇ ಮೊದಲು ಭೇಟಿ ಮಾಡಬೇಕು ಎಂದು ಈ ದೇಶದ ಸಂವಿಧಾನದ ನಿಯಮವೇ? ಎಂದು ತಿರುಗೇಟು ಕೊಟ್ಟಿದ್ದಾರೆ.