ಒಲಿಂಪಿಕ್ಸ್ ಅಂಗಳದಲ್ಲಿ ಮಹಾ ಘಟಾಘಟಿಗಳನ್ನು ಚಿತ್ ಕೆಡವಿ ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ಸ್ ಅಂಗಳದಲ್ಲಿ ಭಾರತೀಯ ಹೆಮ್ಮೆಯ ನಾರಿಯೊಬ್ಬಳು ಕುಸ್ತಿ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಪ್ಯಾರಿಸ್ ಅಖಾಡದಲ್ಲಿ ಭಾರತದ ಗರಿಮೆಗೆ ಮತ್ತಷ್ಟು ಗರಿ ಮೂಡಿಸಿದ್ದ ವಿನೇಶ್ ಪೋಗಟ್ ಈಗ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದಾರೆ. 100 ಗ್ರಾಂ ತೂಕ ಹೆಚ್ಚಾಗಿದ್ದೊಂದೇ ಕಾರಣವನ್ನು ಮುಂದಿಟ್ಟುಕೊಂಡು ಈಗ ಪೋಗಟ್ರನ್ನ ಆಚೆ ಇಡಲಾಗಿದೆ.
ಸುಮ್ಮನೆ ಕುಳಿತಿಲ್ಲ ಭಾರತ: ಕೇಂದ್ರ ಸರ್ಕಾರದ ಮುಂದಿನ ನಡೆಯೇನು?
ವಿನೇಶ್ ಪೋಗಟ್ ಅನರ್ಹತೆಯ ವಿಷಯ ಈಗ ಇಡೀ ದೇಶಾದ್ಯಂತ ಸುದ್ದಿಯಾಗಿದೆ. ಎಲ್ಲಾ ಸವಾಲುಗಳನ್ನು ಟೀಕೆಗಳನ್ನು ಮೆಟ್ಟಿ ನಿಂತು ಕುಸ್ತಿ ಅಂಗಳದಲ್ಲಿಯೇ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದ ವಿನೇಶ್ಗೆ ಹೀಗಾಗಿದ್ದು ಎಲ್ಲರಿಗೂ ಬೇಸರ ತರಿಸಿದೆ. ಇದನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿ, ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ನ ಅಧ್ಯಕ್ಷೆ ಪಿ.ಟಿ ಉಷಾ ಅವರೊಂದಿಗೆ ಮಾತನಾಡಿದ್ದಾರೆ. ಪಿ.ಟಿ.ಉಷಾರಿಂದ ಸಂಪೂರ್ಣ ಮಾಹಿತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ವಿನೇಶ್ ಪೋಗಟ್ಗೆ ಬೆಂಬಲಕ್ಕೆ ನಿಲ್ಲಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡಲು ಸೂಚನೆ ನೀಡಿದ್ದಾರೆ. ಅಗತ್ಯ ಬಿದ್ದಲ್ಲಿ ಪ್ರಬಲ ಪ್ರತಿಭಟನೆ ದಾಖಲಿಸಲೂ ಮುಂದಾಗಿ ಎಂದು ಸೂಚನೆ ನೀಡಿದ್ದಾರೆ. ಆದ್ರೆ ಸದ್ಯಕ್ಕೆ ಒಲಿಂಪಿಕ್ಸ್ ನಿಯಮದ ಅನ್ವಯ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಲ್ಲಿ ಅವಕಾಶವಿಲ್ಲ. ಹೀಗಾಗಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ.