ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಅಧ್ಯಯನ ನಡೆಸಲು ಕೃಷಿ ಸಚಿವ ಹಾಗೂ ಕಾವೇರಿ ಆರತಿ ಅಧ್ಯಯನ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಉತ್ತರಾಖಂಡ್ನ ಹರಿದ್ವಾರಕ್ಕೆ ಈಗಾಗಲೆ ತೆರಳಿದೆ. ಶುಕ್ರವಾರ ಸಂಜೆ ನಿಯೋಗ ಗಂಗಾ ಆರತಿ ವೀಕ್ಷಿಸಿತು. ಬಳಿಕ, ಗಂಗಾ ಆರತಿ ನಡೆಸುವ ಗಂಗಾರತಿ ಸಭಾದೊಂದಿಗೆ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಸಭೆ ನಡೆಸಿತು. ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ.
ಸಭೆಯಲ್ಲಿ ಗಂಗಾರತಿ ಸಭಾದ ಮುಖ್ಯ ಕಾರ್ಯದರ್ಶಿ ತನ್ಮಯ ವಸಿಷ್ಠ, ಅಧ್ಯಕ್ಷ ನಿತಿನ್ ಗೌತಮ್, ಸಭಾಪತಿ ಕೃಷ್ಣಕುಮಾರ್ ಶರ್ಮಾ ಭಾಗಿಯಾಗಿದ್ದರು. ಸಭೆಯಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ನಿಯೋಗ ಸಲಹೆ ಪಡೆದುಕೊಂಡಿದೆ.
ಗಂಗಾಸಭಾ ನೀಡಿದ ಸಲಹೆ:
ಉತ್ತರಾಖಂಡ್ನ ಹರಿದ್ವಾರದ ಗಂಗಾರತಿ ಅತ್ಯಂತ ಪುರಾತನವಾದದ್ದು. ಇಲ್ಲಿ ಅತ್ಯಂತ ಪಾರದರ್ಶಕವಾಗಿ ಎಲ್ಲವನ್ನೂ ನಡೆಸಲಾಗುತ್ತಿದೆ. ಸರ್ಕಾರದಿಂದ ಯಾವುದೇ ಸಹಾಯವನ್ನು ನಾವು ಪಡೆಯುತ್ತಿಲ್ಲ. ಎಲ್ಲವೂ ದಾನಿಗಳಿಂದಲೇ ಗಂಗಾರತಿ ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರದಿಂದ ಧನ ಸಹಾಯ ಪಡೆದರೆ 5 ವರ್ಷ ಅಥವಾ 10 ವರ್ಷ ಮಾತ್ರ ನಡೆಯುತ್ತೆ. ಮುಂದೆ ಬರುವ ಸರ್ಕಾರ ಅದನ್ನು ಮುಂದುವರಿಸದೆ ಇರಬಹುದು. ಗಂಗಾ ನದಿ ಧಾರ್ಮಿಕ ಹಿನ್ನೆಲೆಯುಳ್ಳ ನದಿ, ಈ ಸ್ಥಳಕ್ಕೆ ಐತಿಹ್ಯ ಇದೆ. ಇದೇ ರೀತಿ ಕಾವೇರಿ ನದಿ ಇತಿಹಾಸ, ಧಾರ್ಮಿಕತೆ ಹಿನ್ನೆಲೆ ಇರಿಸಿಕೊಂಡು, ಕಾವೇರಿ ಆರತಿ ಮಾಡಿದರೆ ಸೂಕ್ತ ಎಂದು ಗಂಗಾರತಿ ಸಭಾ ಸಲಹೆ ನೀಡಿದೆ.
ಧಾರ್ಮಿಕತೆ ಮತ್ತು ನಂಬಿಕೆಯನ್ನು ಹೊರತಾಗಿಸಿ ಆರತಿ ಬೆಳಗಿದರೆ ವ್ಯರ್ಥ. ಹರಿದ್ವಾರದ ಗಂಗಾರತಿ ಸಂಪೂರ್ಣವಾಗಿ ಮಂಡಳಿ ನೋಡಿಕೊಳ್ಳುತ್ತೆ. ಮಂಡಳಿ ಸದಸ್ಯರು ಸೇರಿ ಪದಾಧಿಕಾರಿಗಳು ಚುನಾವಣೆ ಮೂಲಕ ಆಯ್ಕೆ ಆಗುತ್ತಾರೆ. ಒಟ್ಟು 750 ಜನ ಸದಸ್ಯರು ಇದ್ದಾರೆ, ಮೂವರನ್ನು ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಸಭಾಪತಿ, ಮುಖ್ಯ ಕಾರ್ಯದರ್ಶಿ ಅವರನ್ನು ಸಹ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿತು.
11 ಜನರಂತೆ ಪೂಜಾರಿಗಳ ತಂಡ ಇದೆ, ಎಲ್ಲರಿಗೂ ತರಬೇತಿ ಕೊಡುತ್ತೇವೆ. ಪೂಜಾರಿಗಳಿಗೆ ಸಂಬಳ ಕೊಡಲ್ಲ, ಗೌರವಧನ ಅಂತ ಕೊಡುತ್ತೇವೆ. ಯಾವುದೇ ಕಾರಣಕ್ಕೂ ಒಮ್ಮೆ ಪ್ರಾರಂಭಿಸಿದ ಮೇಲೆ ನಿಲ್ಲಬಾರದು. ಹರಿದ್ವಾರದಲ್ಲಿ ಕೊರೊನಾ ಸಂದರ್ಭದಲ್ಲೂ ಗಂಗಾರತಿ ಪೂಜೆ ನಿಂತಿಲ್ಲ ಎಂದು ಗಂಗಾರತಿ ಸಭಾ ತಿಳಿಸಿದೆ.