ರಾಜ್ಯ ವನ್ಯಜೀವಿ ಮಂಡಳಿಯನ್ನು ಪುನಾರಚಿಸಲಾಗಿದ್ದು, ಶಾಸಕರ ಜತೆಗೆ ಕೆಲ ಸಚಿವರು, ಶಾಸಕರ ಮಕ್ಕಳನ್ನು ಮಂಡಳಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಗೆ ವನ್ಯ ಜೀವಿ ಮಂಡಳಿಯನ್ನು ರಚಿಸಿ ಆದೇಶಿಸಲಾಗಿದ್ದು, ಮಂಡಳಿ ನಿಯಮದಂತೆ ಸಿಎಂ ಅಧ್ಯಕ್ಷ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಉಪಾಧ್ಯಕ್ಷರಾಗಿರಲಿದ್ದಾರೆ. ಅವರೊಂದಿಗೆ ವಿವಿಧ ವಿಭಾಗಗಳಲ್ಲಿ 16 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ರಾಜ್ಯ ವಿಧಾನಮಂಡಲದ ಸದಸ್ಯರಾಗಿ ಶಾಸಕರಾದ ಅಶೋಕ್ ಎಂ.ಪಟ್ಟಣ, ಎಚ್.ಎಂ.ಗಣೇಶ್ ಪ್ರಸಾದ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ನಿಯೋಜಿಸಲಾಗಿದೆ. ವನ್ಯಜೀವಿ ಬಗ್ಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳಿಂದ ವೈಲ್ಡ್ಲೈಫ್ ಅಸೋಸಿಯೇಷನ್ ಆಫ್ ಸೌತ್ ಇಂಡಿಯಾದ ಸುಶೀಲ್ ಗ್ಯಾನ್ ಚಂದ್, ಟೈಗರ್ಸ್ ಅನ್ಲಿಮಿಟೆಡ್ ವೈಲ್ಡ್ ಲೈಫ್ ಸೊಸೈಟಿಯ ಸೀಮಾ ಬೇಗಂ ಖಲೀಲ್, ಬೆಂಗಳೂರು ಟ್ರಸ್ಟ್ನ ಡಾ. ಆರ್.ವಿ.ದಿನೇಶ್ ಅವರನ್ನು ನೇಮಿಸಲಾಗಿದೆ.
ಸಂರಕ್ಷಣಾ ವಿಶೇಷ ತಜ್ಞರು, ಜೀವಿ ಶಾಸ್ತ್ರಜ್ಞರು ಹಾಗೂ ಪರಿಸರವಾದಿಗಳ ವಿಭಾಗದಲ್ಲಿ ಸಚಿವ ಎಂ.ಬಿ. ಪಾಟೀಲ್ ಪುತ್ರ ಧ್ರುವ್ ಪಾಟೀಲ್, ಶಾಸಕ ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಅವರೂ ಸೇರಿದಂತೆ ರವೀಂದ್ರ ರಘುನಾಥ್, ಚಿಕ್ಕಣ್ಣ, ಡಾ. ರಾಜ್ಕುಮಾರ್ ಎಸ್.ಅಲೆ, ಸಂಕೇತ್ ಪೂವಯ್ಯ, ಅಜಿತ್ ಕರಿಗುಡ್ಡಯ್ಯ, ವಿನಯ್ಕುಮಾರ್ ಮಾಳಿಗೆ, ಡಾ. ಸಂತೃಪ್ತ, ಮಲ್ಲಪ್ಪ ಎಸ್.ಅಂಗಡಿ ಅವರನ್ನು ಸದಸ್ಯರನ್ನಾಗಿಸಲಾಗಿದೆ. ಉಳಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು, ಸಂಸ್ಥೆಗಳ 10 ಅಧಿಕಾರಿಗಳನ್ನು ಪದನಿಮಿತ್ತ ಸದಸ್ಯರನ್ನಾಗಿಸಲಾಗಿದೆ. ರಾಜ್ಯ ವನ್ಯ ಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ.