ತಮಿಳಿನ ನಟ ವಿಜಯ್ ‘ದಳಪತಿ 69’ ಬಗ್ಗೆ ಇಂಟರೆಸ್ಟಿಂಗ್ ಅಪ್ಡೇಟ್ ಸಿಕ್ಕಿದೆ. ಕಮಲ್ ಹಾಸನ್ ಹೇಳಿದ್ದ ಕಥೆಯಲ್ಲಿ ವಿಜಯ್ ನಟಿಸಲು ರೆಡಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಅದಷ್ಟೇ ಅಲ್ಲ, ಈ ಸಿನಿಮಾ ಕಥೆ ಹೇಗಿರಲಿದೆ ಎಂಬ ಸುಳಿವು ಕೂಡ ಸಿಕ್ಕಿದೆ.
‘ದಳಪತಿ 69’ ಸಿನಿಮಾಗೆ ವಿಜಯ್ ಫೈನಲ್ ಆಗುವ ಮುನ್ನ ಈ ಕಥೆಯನ್ನು ಕಮಲ್ ಹಾಸನ್ ಸೇರಿದಂತೆ ಅನೇಕ ನಟರಿಗೆ ಹೇಳಿದ್ದರು ಎನ್ನಲಾಗ್ತಿದೆ. ಆದರೆ ಕಾರಣಾಂತರಗಳಿಂದ ಸಿನಿಮಾ ಮಾಡಲು ಆಗಲಿಲ್ಲ. ಆ ನಂತರ ಈ ಚಿತ್ರದ ಕಥೆ ಕೇಳಿ, ಸಿನಿಮಾ ಕೆರಿಯರ್ನ ಕೊನೆಯ ಚಿತ್ರ ಇದಾದರೆ ಸೂಕ್ತ ಎಂದೆನಿಸಿ ವಿಜಯ್ ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿನೋದ್ ನಿರ್ದೇಶನದಲ್ಲಿ ‘ದಳಪತಿ 69’ ಸಿನಿಮಾ ಮೂಡಿ ಬರಲಿದೆ. ಇನ್ನೂ ಹೆಸರಿಡದ ಈ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಮುಂದಿನ ವರ್ಷ ಅಕ್ಟೋಬರ್ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದ್ದಾರೆ. ಇನ್ನು ವಿಜಯ್ ಪೊಲಿಟಿಕಲ್ ಜರ್ನಿಗೆ ಈ ಚಿತ್ರವನ್ನು ವೇದಿಕೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಅಂಶಗಳನ್ನು ಸೇರಿಸಿ ಚಿತ್ರವನ್ನು ತೆರೆಗೆ ತರಲಾಗುತ್ತದೆ. ‘ದಳಪತಿ 69’ ಅನೌನ್ಸ್ಮೆಂಟ್ ಪೋಸ್ಟರ್ ಗಮನ ಸೆಳೆದಿದೆ. ‘ಪ್ರಜಾಪ್ರಭುತ್ವದ ಜ್ಯೋತಿ ಹಿಡಿಯುವವನು ಶೀಘ್ರದಲ್ಲೇ ಬರುತ್ತಿದ್ದಾರೆ’ ಎನ್ನುವ ಪೋಸ್ಟರ್ನಲ್ಲಿ ಇರುವ ಸಾಲು ಕುತೂಹಲ ಮೂಡಿಸಿದೆ.
2026ರ ಚುನಾವಣೆಗೆ ಈಗಿಂದಲೇ ವಿಜಯ್ ತಯಾರಿ ನಡೆಸಿದ್ದಾರೆ. ಆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ. ಮುಂದಿನ ವರ್ಷ ಅಕ್ಟೋಬರ್ನಲ್ಲಿ ‘ದಳಪತಿ 69’ ಸಿನಿಮಾ ರಿಲೀಸ್ ಮಾಡಿ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಆಲೋಚನೆಯಲ್ಲಿದ್ದಾರೆ.