ನನಗೆ ಈ ಟಿವಿ ಬೇಡ, ತೆಗೆದುಕೊಂಡು ಹೋಗಿ ಎಂದು ದರ್ಶನ್ ಜೈಲಾಧಿಕಾರಿಗಳಿಗೆ ಹೇಳಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿ 14 ದಿನಗಳಾಗಿದೆ. ಬಳ್ಳಾರಿ ಜೈಲಿಗೆ ಸೇರಿದ ಬಳಿಕ ಟಿವಿ ನೀಡುವಂತೆ ದರ್ಶನ್ ಮನವಿ ಮಾಡಿದ್ದರು.
ಜೈಲಿನ ನಿಯಮಗಳ ಪ್ರಕಾರ ದರ್ಶನ್ಗೆ ಟಿವಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ನೀಡಿದ್ದ ಟಿವಿಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಪದೇ ಪದೇ ಸ್ವಿಚ್ ಆಫ್ ಆಗುತ್ತಿತ್ತು ಮತ್ತು ಬ್ಲರ್ ಆಗಿ ಚಿತ್ರಗಳು ಕಾಣುತ್ತಿದ್ದವು. ಟಿವಿಯಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ರಿಪೇರಿ ಮಾಡಿಕೊಡಿ ಎಂದು ದರ್ಶನ್ ಮನವಿ ಮಾಡಿದ್ದರು. ಆದರೆ ನಮ್ಮಲ್ಲಿ ಇರುವುದು ಇದೇ ಟಿವಿ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ದರ್ಶನ್ ಬೇರೆ ಟಿವಿ ಇದ್ದರೆ ನೀಡಿ ಎಂದು ಕೇಳಿಕೊಂಡಿದ್ದಾರೆ. ಈ ಮನವಿಗೆ ಜೈಲಾಧಿಕಾರಿಗಳು ಬೇರೆ ಟಿವಿ ಇಲ್ಲ ಎಂದು ಉತ್ತರಿಸಿದ್ದಾರೆ. ಆಗಾಗ ತಾಂತ್ರಿಕ ಸಮಸ್ಯೆ ಆಗುತ್ತಿದ್ದ ಹಿನ್ನೆಲೆಯಲ್ಲಿ ದರ್ಶನ್ ನನಗೆ ಟಿವಿಯೇ ಬೇಡ ಎಂದು ಹೇಳಿ ಇದನ್ನು ತೆಗೆದುಕೊಂಡು ಹೋಗಿ ಎಂದು ದರ್ಶನ್ ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.