ಮ್ಯಾಟ್ರಿಮೋನಿ ವೆಬ್ಸೈಟ್ಗಳಲ್ಲಿ ಮದುವೆಗೆಂದು ಹುಡುಗಿ ನೋಡುತ್ತಿದ್ದರೆ ಈ ಸ್ಟೋರಿ ನೋಡಿ.
ಮೂಲತಃ ಶಿವಮೊಗ್ಗದವರಾದ ಕೋಮಲ ಎಂಬ ಮಹಿಳೆ, ಗಂಡ ಮೃತಪಟ್ಟ ಬಳಿಕ ಕಲ್ಯಾಣ್ ಮ್ಯಾಟ್ರಿಮೋನಿಯಲ್ಲಿ ತನ್ನ ಪ್ರೊಫೈಲ್ ಮಾಡಿಕೊಂಡು ಮದುವೆ ಮಾಡಿಕೊಳ್ಳಲು ಗಂಡಸರನ್ನು ಹುಡುಕುತ್ತಿದ್ದಾರೆ. ಈಕೆಯ ಮೈಮಾಟ, ಮರಳು ಮರಳು ಮಾತಿಗೆ ಸೋತರೇ ನಿಮಗೆ ಮೂರು ನಾಮ ಖಂಡಿತ. ಹೀಗೆ ಈಕೆಗೆ ಮರುಳಾಗಿ ಲಕ್ಷ-ಲಕ್ಷ ಹಣ, ಚಿನ್ನವನ್ನು ಕಳೆದುಕೊಂಡವರು ಒಬ್ಬರಲ್ಲ, ಇಬ್ಬರಲ್ಲ. ಮದುವೆ ಮಾಡಿಕೊಳ್ಳುವುದಾಗಿ ಆಮಿಷವೊಡ್ಡಿ ಹಲವರಿಗೆ ವಂಚನೆ ಮಾಡಿದ್ದಾಳೆ. ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಮದುವೆ ಆಮಿಷವೊಡ್ಡಿ ಪುರುಷರಿಗೆ ವಂಚಿಸವುದನ್ನೇ ಕಾಯಕ ಮಾಡಿಕೊಂಡಿದ್ದ ಮಹಿಳೆ ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮೂಲದ ಫಾರ್ಮಸಿಸ್ಟ್ ರಾಘವೇಂದ್ರ ಎನ್ನುವವರನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ಅವರಿಂದ ಏಳೂವರೆ ಲಕ್ಷ ರೂಪಾಯಿ ಹಣ ಪೀಕಿದ್ದಾಳೆ. ಹಣ ಅಕೌಂಟ್ಗೆ ಬರುತ್ತಿದ್ದಂತೆ ಅವರ ಪೋನ್ ನಂಬರ್ಗಳನ್ನು ಬ್ಲಾಕ್ ಮಾಡಿ ಜೂಟ್ ಆಗಿದ್ದಾಳೆ. ಈ ಪ್ರಕರಣ ದಾಖಲಿಸಿಕೊಂಡು ಚಿಕ್ಕಬಳ್ಳಾಪುರ ಸೈಬರ್ಠಾಣೆ ಪೊಲೀಸರು, ಮದನಾರಿ ಕೋಮಲರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈಕೆ ಮದುವೆ ಮಾಡಿಕೊಳ್ಳುವುದಾಗಿ ಆಮಿಷವೊಡ್ಡಿ ಪುರುಷರನ್ನು ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ.
ಉದ್ಯಮಿ ಸೇರಿ ಹಲವಾರು ಜನರಿಗೆ ವಂಚಿಸಿದ್ದ ಕೋಮಲ
ಇತ್ತೀಚೆಗೆ ಬೆಂಗಳೂರಿನ ತಾವರೆಕೆರೆ ಮೂಲದ ಮಧುಸೂಧನ್ ಎನ್ನುವವರನ್ನು ಮದುವೆಯಾಗಿ ಆತನಿಂದ ಹತ್ತು ಲಕ್ಷ ರೂಪಾಯಿ ಹಣ, ಚಿನ್ನಾಭರಣ ಲಪಟಾಯಿಸಿದ್ದಾಳೆ. ಬೆಂಗಳೂರಿನ ಉದ್ಯಮಿ ನಾಗರಾಜ್, ಕುಂದಾಪುರದ ರಾಘವೇಂದ್ರ, ಗೌರಿಬಿದನೂರಿನ ರಾಘವೇಂದ್ರ ಎಲ್ಲರಿಗೂ ಪಂಗನಾಮ ಹಾಕಿದ್ದಾಳೆ. ಇನ್ನು ಇಬ್ಬರಿಗೆ ಮದುವೆ ಮಾಡಿಕೊಳ್ಳುವುದಾಗಿ ಆಮಿಷವೊಡ್ಡಿದ್ದಳು. ಅಷ್ಟರಲ್ಲಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.