ರಾಜ್ಯ ಸರ್ಕಾರ ರಾಮನಗರ ಹೆಸರು ಬದಲಾವಣೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು, ರಾಮನ ಹೆಸರು ತೆಗೆದು ಹಾಕುವುದಕ್ಕೆ ಸಾಧ್ಯವಿಲ್ಲ. 2028ರೊಳಗೆ ಮತ್ತೆ ರಾಮನಗರ ಅಂತಾ ಆಗುತ್ತದೆ ಎಂದು ಶುಕ್ರವಾರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ರಾಮನಗರ ಹೆಸರು ಬದಲಾವಣೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಅವರು ಸ್ವಲ್ಪ ದಿನ ಖುಷಿಯಾಗಿರಲಿ. ರಾಜಕೀಯ ಪತನ ಆರಂಭವಾಗಿದೆ. ಜಿಲ್ಲೆಯ ಹೆಸರು ಬದಲಿಸಲು ಅರ್ಜಿ ಕೊಟ್ಟವ ಯಾರು? ಹೆಸರು ಬದಲಿಸುವುದರಿಂದ ಏನು ಸಿಗುತ್ತೆ ಎಂದು ವಾಗ್ದಾಳಿ ನಡೆಸಿದರು.
ರಾಮನಗರದ ಇತಿಹಾಸ ಅವರಿಗೆ ಗೊತ್ತಿದ್ಯಾ? ರಾಮನಗರ ಈಗಾಗಲೇ ಅಭಿವೃದ್ಧಿ ಆಗಿದೆ. ಹೆಸರು ಬದಲಿಸಿ ಭೂಮಿ ಬೆಲೆ ಏರಿಸಬೇಕಾ? ಕಾನೂನು ಸುವ್ಯವಸ್ಥೆ ಹೇಗಿದೆ ನೋಡಬೇಕು? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಡದೇ ಏನು ಅಭಿವೃದ್ಧಿ ಮಾಡಿದ್ರೆ ಏನು ಪ್ರಯೋಜನ ಬಂತು ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇನ್ನು ತಾವೂ ಮುಡಾದಲ್ಲಿ ಸೈಟ್ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸರ್ಕಾರ ನನ್ನ ಹೆಸರನ್ನು ದುರ್ಬಳಕೆ ಮಾಡುತ್ತಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ. ಸಿದ್ದರಾಮಯ್ಯನವರ ಕುಟುಂಬಕ್ಕೆ ಅಕ್ರಮವಾಗಿ ನಿವೇಶನ ಹಂಚಿಕೆಯಾಗಿರುವುದರಿಂದ, ಅದರಿಂದ ಪಾರಾಗಲು ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ” ಎಂದು ತಿರುಗೇಟು ನೀಡಿದರು.
1984ರಲ್ಲಿ ಸಿಐಟಿಬಿ ಎಂದು ಇತ್ತು, ಮುಡಾ ಎನ್ನುವ ಹೆಸರು ಇರಲಿಲ್ಲ. ನನಗೆ 21,000 ಚದರ ಅಡಿ ಕೈಗಾರಿಕಾ ಜಮೀನನ್ನು ನೀಡಿತ್ತು. ಆ ವೇಳೆ ನಾನು 33 ಸಾವಿರ ಅದಕ್ಕೆ ಪಾವತಿ ಮಾಡಿದ್ದೆ. ನನಗೆ ಸ್ವಾಧೀನ ಪತ್ರವನ್ನು ನೀಡಲಾಗಿತ್ತು. ಆದರೆ, ನಿವೇಶನ ನೋಡಲು ಹೋದರೆ, ಅಲ್ಲಿ ನಿವೇಶನವೇ ಇರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇಂದಿಗೆ ನಲವತ್ತು ವರ್ಷವಾದರೂ, ನನಗೆ ಬದಲಿ ನಿವೇಶನ ನೀಡಲಾಗಿಲ್ಲ. ಒಂದು ವೇಳೆ, ಬದಲಿ ನಿವೇಶನ ಕೊಟ್ಟಿದ್ದೇ ಆದಲ್ಲಿ, ನಾನು ಅದನ್ನು ಮುಖ್ಯಮಂತ್ರಿಗಳಿಗೆ ಗಿಫ್ಟ್ ಕೊಡುತ್ತೇನೆ. ಅವರು ಅದನ್ನು ಪಡೆದುಕೊಂಡು ಎಂಜಾಯ್ ಮಾಡಲಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.